ಬೆಂಗಳೂರು: ಮೈಸೂರು ವಿಶ್ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಬೇಕೆಂಬ ಶಿಫಾರಸ್ಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಮೈಸೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡುವ ಪ್ರಸ್ತಾಪವನ್ನ ಸಿದ್ದರಾಮಯ್ಯ ಅವರು ತಿರಸ್ಕರಿಸಿದ್ದಾರೆ ಎಂದು ಕಚೇರಿ ಮೂಲಗಳು ತಿಳಿಸಿವೆ.
2018ನೇ ಸಾಲಿನ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡುವಂತೆ ವಿವಿಯ ಸಿಂಡಿಕೇಟ್ ಸದಸ್ಯ ಎಂಎಸ್ಎಸ್ ಕುಮಾರ್ ಅವರು ವಿವಿ ಕುಲಪತಿಗೆ ಮನವಿ ಮಾಡಿದ್ದರು.
ಸಮಾಜದಲ್ಲಿ ಗಣ್ಯವ್ಯಕ್ತಿಗಳಿಗೆ ನೀಡುವ ಗೌರವ ಡಾಕ್ಟರೇಟ್ ಪದವಿಗೆ ಸಿದ್ದರಾಮಯ್ಯ ಅವರು ಅರ್ಹರಿದ್ದಾರೆ. ಅವರು ಇದೇ ವಿವಿಯಲ್ಲಿ ಪದವಿ ಕೂಡ ಪಡೆದಿದ್ದಾರೆ. ಮೈಸೂರಿನಿಂದ ಹೋಗಿ ರಾಜ್ಯದ ಚುಕ್ಕಾಣಿ ಹಿಡಿದು ಉತ್ತಮ ಆಡಳಿತ ನಡೆಸಿದ್ದಾರೆ. ಇಂಥವರಿಗೆ ಡಾಕ್ಟರೇಟ್ ನೀಡಿದರೆ ಮೈಸೂರು ವಿವಿಯ ಘನತೆ ಹೆಚ್ಚಲಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯನವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸ್ಸು ಮಾಡುತ್ತಿದ್ದೇನೆ ಎಂದು ಸಿಂಡಿಕೇಟ್ ಸದಸ್ಯ ಕುಮಾರ್ ಪತ್ರದಲ್ಲಿ ವಿವರಿಸಿದ್ದರು.
ಇದರ ಜೊತೆಗೆ ಇತರೆ ಸಿಂಡಿಕೇಟ್ ಸದಸ್ಯರು ಸುತ್ತೂರು ಶ್ರೀ, ಸಾಲು ಮರದ ತಿಮ್ಮಕ್ಕ, ಇಸ್ರೋ ಅಧ್ಯಕ್ಷ ಕಿರಣ್ಕುಮಾರ್ ಅವರಿಗೆ ಕೂಡ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸ್ಸು ಮಾಡಿದ್ದರು.