ಬಿಜೆಪಿಯವರು ನಮಗೆ ದೇಶಭಕ್ತಿ ಹೇಳಿಕೊಡಬೇಕಿಲ್ಲ – ಎಫ್‌ಎಸ್‌ಎಲ್ ವರದಿ ಬಗ್ಗೆ ಸಿಎಂ ಹೇಳಿದ್ದೇನು?

Public TV
2 Min Read
Siddaramaiah

ಹಾಸನ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಧ್ವನಿ ಪರೀಕ್ಷೆ ಮಾಡಿದ ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿ ಬಂದ ಕೂಡಲೇ ಅದನ್ನು ಬಹಿರಂಗಪಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಸರಿಸುಮಾರು 1,344 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ ಅವರಿಂದು ಹಾಸನಕ್ಕೆ (Hassan) ಆಗಮಿಸಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಹಾಸನ ಹೊರವಲಯದ ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ವಿಧಾನಸೌಧದಲ್ಲಿ (Vidhan Soudha) ಪಾಕ್ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಧ್ವನಿ ಪರೀಕ್ಷೆ ಮಾಡಿದ ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಮೈಸೂರು-ಕುಶಾಲನಗರ ರೈಲ್ವೇ ಯೋಜನಾ ವೆಚ್ಚ 3168.77 ಕೋಟಿ ರೂ.ಗೆ ಏರಿಕೆ!

Pakistan Zindabad Naseer Hussain

ಎಫ್‌ಎಸ್‌ಎಲ್ ವರದಿ ಬಹಿರಂಗ ಪಡಿಸುವಂತೆ ವಿಪಕ್ಷ ನಾಯಕ ಆರ್‌.ಅಶೋಕ್‌ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ವರದಿ ಬಂದ ಕೂಡಲೇ ಬಹಿರಂಗ ಮಾಡ್ತಿವಿ. ಯಾರೇ ಆದ್ರೂ ಭಾರತದ ಪರ ಇಲ್ಲದೇ, ಬೇರೆ ದೇಶದ ಮೇಲೆ ನಿಷ್ಠೆ ಇದ್ದರೆ ಅಂತಹವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳುತ್ತೇವೆ. ದೇಶ ಭಕ್ತಿಯನ್ನು ನಮಗೆ ಬಿಜೆಪಿಯವರು ಹೇಳಿ ಕೊಡಬೇಕಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ದೇಶ ಭಕ್ತಿ ಹೇಳಿ ಕೊಡಬೇಕಾ? ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟವರು ಯಾರು? ಬಿಜೆಪಿಯವರು ರಾಜಕೀಯಕ್ಕೋಸ್ಕರ ಏನೋ ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ ಮಾತನಾಡಿ, ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಶೀಘ್ರವೇ ಬಿಡುಗಡೆ ಮಾಡ್ತಿವಿ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸರ್ಕಾರ ಅನುಷ್ಠಾನಕ್ಕೆ ತರಬಾರದು: ಒಕ್ಕಲಿಗರ ಸಮಿತಿ ಎಚ್ಚರಿಕೆ

ಇನ್ನೂ `ಕಾಂತರಾಜು’ ಜಾತಿಜನಗಣತಿ ವರದಿ ಸ್ವೀಕರಿಸಿದ್ದಕ್ಕೆ ಹಲವರಿಂದ ವಿರೋಧ ವ್ಯಕ್ತವಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ವರದಿಯನ್ನು ಈಗ ಸ್ವೀಕರಿಸಿದ್ದೇನೆ, ಅದರಲ್ಲಿ ಏನಿದೆ ಅಂತ ಗೊತ್ತಿಲ್ಲ. ಕ್ಯಾಬಿನೆಟ್ ಮುಂದೆ ಮಂಡಿಸಿ ಅದರಲ್ಲಿ ಏನಿದೆ ಎಂಬ ಬಗ್ಗೆ ಚರ್ಚೆ ಮಾಡ್ತಿವಿ ಎಂದಿದ್ದಾರೆ.

ಬಿಜೆಪಿ ಶಾಸಕರು ರಾಜ್ಯಪಾಲರಿಗೆ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರಲ್ಲಿ ಒಬ್ಬರು ಕಾಂಗ್ರೆಸ್‌ಗೆ ವೋಟ್ ಹಾಕಿದ್ರು, ಇನ್ನೊಬ್ಬರು ಗೈರು ಆಗಿದ್ದರು. ಅದನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಅವರಿಗೆ ಎಲ್ಲಾ ಎಂಎಲ್‌ಎಗಳನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳಲು ಆಗಲಿಲ್ಲ. ಅವರ ಅನೈತಿಕ ಮೈತ್ರಿಯನ್ನು ಜನ ಒಪ್ಪಲ್ಲ. ಇದುವರೆಗೂ ಯಾವುದೇ ಕಾರಣಕ್ಕೂ ಕೋಮುವಾದಿಗಳ ಜೊತೆ ಹೋಗಲ್ಲ ಅಂತ ಹೇಳ್ತಿದ್ದ ಜೆಡಿಎಸ್ ಈಗ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ: ಜಾತಿಗಣತಿ ಬಗ್ಗೆ ಶಾಮನೂರು ಶಿವಶಂಕರಪ್ಪ ಕಿಡಿ

Share This Article