ಮಂಡ್ಯ: ಸಿಎಂ ಕುಮಾರಸ್ವಾಮಿ ಅವರು ತೆಲಗು ಮಾಧ್ಯಮಕ್ಕೆ ಸಂದರ್ಶನ ನೀಡಿರುವ ವೀಡಿಯೋವನ್ನು ಅಂಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ, ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಅನ್ನೊ ಜೆಡಿಎಸ್ ಅವರಿಗೆ ಅನಿತಾ ಕುಮಾರಸ್ವಾಮಿ ಮೂಲತಃ ಎಲ್ಲಿನವರು ಎಂದು ತಿಳಿದಿಲ್ವಾ ಅಂತ ಟಾಂಗ್ ನೀಡಿದ್ದಾರೆ.
ನಟ ನಿಖಿಲ್ ಕುಮಾರಸ್ವಾಮಿ ಅವರ ಜಾಗ್ವಾರ್ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ತೆಲುಗು ಖಾಸಗಿ ವಾಹಿನಿಯೊಂದಕ್ಕೆ ಸಿಎಂ ಕುಮಾರಸ್ವಾಮಿ ಸಂದರ್ಶನ ನೀಡಿದ್ದರು. ಆಗ ನಾನು ಮದುವೆ ಆಗಿರೋದು ಕೋಲಾರದ ತೆಲುಗು ಕುಟುಂಬದ ಹೆಣ್ಣನ್ನ ಎಂದು ಸಿಎಂ ಹೇಳಿಕೆ ನೀಡಿದ್ದರು. ಸುಮಲತಾ ಅವರು ಗೌಡ್ತಿ ಅಲ್ಲ ಎಂಬ ವಿಚಾರದ ಹಿನ್ನೆಲೆಯಲ್ಲಿ ಅಂಬಿ ಅಭಿಮಾನಿಗಳು ಸಿಎಂ ಅವರ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂದು ಎಂಎಲ್ಸಿ ಶ್ರೀಕಂಠೇಗೌಡ ಹೇಳಿಕೆ ನೀಡಿದ್ದರು. ಅದಕ್ಕೆ ಅಂಬಿ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ ಅಂದ್ಮೇಲೆ ಅನಿತಾ ಕುಮಾರಸ್ವಾಮಿ ಯಾರು? ಅವರು ತೆಲಗು ಕುಟುಂಬದಿಂದ ಬಂದವರು ಎಂದು ಜೆಡಿಎಸ್ಗೆ ಗೊತ್ತಿಲ್ವಾ ಎಂದು ಅಂಬಿ ಅಭಿಮಾನಿಗಳು ಸಿಎಂ ವಿಡಿಯೋ ಆಧಾರವಾಗಿ ಇಟ್ಟುಕೊಂಡು ಜೆಡಿಎಸ್ ಅವರನ್ನು ಟೀಕಿಸುತ್ತಿದ್ದಾರೆ.
ಸುಮಲತಾ ಅಂಬರೀಶ್ ವಿರುದ್ಧ ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶೆಟ್ಡಹಳ್ಳಿಯಲ್ಲಿ ಅಂಬರೀಶ್ ಅಭಿಮಾನಿಗಳು ರಸ್ತೆತಡೆ ನಡೆಸಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ವಾಹನಗಳ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಕೆ.ಟಿ ಶ್ರೀಕಂಠೇಗೌಡ ಭಾವಚಿತ್ರಕ್ಕೆ ಅಭಿಮಾನಿಗಳು ಬೆಂಕಿ ಹಚ್ಚಿದ್ದಾರೆ. ಶ್ರೀಕಂಠೇಗೌಡರು ಕೂಡಲೇ ಕ್ಷಮೆಯಾಚನೆ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಲಾಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv