ಮೈಸೂರು: ಕಳೆದ ಮೂರು ವಾರಗಳಿಂದ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗರಂ ಆಗಿದ್ದಾರೆ.
ನಾನು ಮಾಧ್ಯಮದವರ ಜೊತೆ ಉತ್ತಮ ಸ್ನೇಹ ಇಟ್ಟುಕೊಂಡ ವ್ಯಕ್ತಿ. ಕೆಲ ದಿನಗಳ ಹಿಂದೆ ಮಾಧ್ಯಮದವರ ಸಹವಾಸವೇ ಡೇಂಜರ್ ಅಂತಾ ದೂರ ಉಳಿದುಕೊಂಡಿದ್ದೇನೆ. ನಾನು ಮಾಧ್ಯಮದಿಂದ ಬದುಕಿಲ್ಲ. ನಾಡಿನ ಆರೂವರೆ ಕೋಟಿ ಜನರ ಆಶೀರ್ವಾದದಿಂದ ಬದುಕಿದ್ದೇನೆ. ಮಾತು ಎತ್ತಿದರೆ ಸಿಎಂ ಕುರ್ಚಿ ಗಢ ಗಢ ಅಂತಾ ಶುರು ಮಾಡಿಕೊಳ್ಳುತ್ತಾರೆ. ಕೆಲವು ದೃಶ್ಯ ಮಾಧ್ಯಮಗಳು ತಮ್ಮ ಟೈಮ್ ಫಿಲ್ ಮಾಡಿಕೊಳ್ಳೋಕೆ ನಾವು ಹೇಳಿರದ ವಿಷಯಗಳನ್ನು ಅರ್ಧ ಗಂಟೆ ಎಪಿಸೋಡ್ ಮಾಡ್ತಾರೆ. ನಿಖಿಲ್ ಎಲ್ಲಿದ್ದೀಯಪ್ಪಾ? ಎಂಬ ವಿಷಯದ ಬಗ್ಗೆ ಅರ್ಧ ಗಂಟೆ ಸಂಚಿಕೆ ಮಾಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾನೂನು ತರಲು ಚರ್ಚೆ ನಡೆಸಿದ್ದೇವೆ. ಕೆಲವೊಂದು ವಾಹಿನಿಗಳು ರಾಜಕಾರಣಿಗಳನ್ನು ವ್ಯಂಗ್ಯವಾಗಿ ತೋರಿಸುತ್ತಾರೆ. ನಾವೇನು ಬಿಟ್ಟಿ ಸಿಕ್ಕಿದ್ದೇವಾ? ನಮ್ಮ ಪ್ರತಿಯೊಂದು ಹೇಳಿಕೆಗಳನ್ನು ವ್ಯಂಗ್ಯವಾಗಿ ತೋರಿಸುವ ಅಧಿಕಾರವನ್ನು ಮಾಧ್ಯಮಗಳಿಗೆ ಯಾರು ನೀಡಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಈ ಸಮ್ಮಿಶ್ರ ಸರ್ಕಾರ ಸದೃಢವಾಗಿದ್ದು, ಅಷ್ಟೊಂದು ಸುಲಭವಾಗಿ ಹೋಗಲ್ಲ.
ಶನಿವಾರ ಬಸವರಾಜ್ ಹೊರಟ್ಟಿ ಅವರ ಹೇಳಿಕೆ ಬಳಿಕ ನಾನು ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದೇವೆ ಎಂಬ ಸುದ್ದಿ ಬಿತ್ತರವಾಗಿತ್ತು. ನಾವು ಯಾವುದೇ ಸಮಾಲೋಚನೆಯೂ ನಡೆಸದೇ ನಮ್ಮ ಕೆಲಸದಲ್ಲಿ ನಾವು ನಿರತವಾಗಿದ್ದೇವು. ಬಿಜೆಪಿ ನಾಯಕರು ಕಳೆದ 10 ತಿಂಗಳುಗಳಿಂದ ಗರಿ ಗರಿ ಹೊಸ ಬಟ್ಟೆ ಹೊಲಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರು ಅನಾವಶ್ಯಕವಾಗಿ ಸರ್ಕಾರ ಬೀಳುತ್ತೆ ಹೇಳುತ್ತಿರೋದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ.
ಮೈತ್ರಿ ಸರ್ಕಾರ ಮಾಜಿ ಸಿಎಂ ಸಿದ್ದರಾಮಯ್ಯರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾವನೆಗಳಿಗೆ ಬೆಲೆಕೊಟ್ಟು ನಡೆಯುತ್ತಿದೆ. ಇಲ್ಲಿ ಏನೇ, ಯಾರೇ ಮಾತನಾಡಿದರೂ ಸರ್ಕಾರ ಸುಭದ್ರವಾಗಿದೆ. ನಾನು ದೇವಸ್ಥಾನಗಳಿಗೆ ಹೋದ್ರೆ ಟೆಂಪಲ್ ರನ್, ಅದೇ ಪ್ರಧಾನಿ ಮೋದಿ ಹೋದ್ರೆ ವಿಷಯವೇ ಅಲ್ಲ.
ಸೀಟಿನ ಅಭದ್ರತೆಯಿಂದ ಮೋದಿ ಧ್ಯಾನ:
ಪ್ರಧಾನಿ ಮೋದಿ ಬದರಿನಾಥ ಸನ್ನಿಧಾನದಲ್ಲಿ ತಮಗೋಸ್ಕರ ಧ್ಯಾನಕ್ಕೆ ಕುಳಿತಿಲ್ಲ ಅಂತಾ ಕೆಲವರು ಹೇಳುತ್ತಾರೆ. ತಮ್ಮ ಕುರ್ಚಿಯ ಅಭದ್ರತೆ ಕಂಡು ಬಂದಿದ್ದರಿಂದ ಶಿವನ ಧ್ಯಾನದಲ್ಲಿ ಮೋದಿ ಕುಳಿತಿದ್ದಾರೆ. ಬದರಿನಾಥದಲ್ಲಿ ಪ್ರವಾಹ ಬಂದು ಇಷ್ಟು ವರ್ಷಗಳಾದ್ರೂ ಇಲ್ಲಿಯವರೆಗೂ ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಅಲ್ಲಿ ಮಾಡಿಲ್ಲ. ಇಷ್ಟು ದಿನ ಏನು ಮಾಡದೇ ಇದ್ದವರು ಮುಂದಿನ ಬಾರಿ ಕೆಲಸ ಮಾಡಿಕೊಡ್ತಾರೆ ಅಂತಾ ಹೇಳುತ್ತಾರೆ. ಕಳೆದ ಐದು ವರ್ಷ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇದ್ದರೂ ಅಭಿವೃದ್ಧಿ ಕೆಲಸ ಮಾಡಿಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಕೊಡಗು ಪ್ರವಾಹ ಸಂತ್ರಸ್ತರಿಗೆ ಹತ್ತೂವರೆ ಲಕ್ಷದ ಮೌಲ್ಯದಲ್ಲಿ 800 ಗುಣಾತ್ಮಕ ಮನೆಗಳನ್ನು ಕಟ್ಟುತ್ತಿದ್ದೇವೆ. ಈ ಬಾರಿ ಮಳೆಯಾದ್ರೆ ಕೊಡಗಿನಲ್ಲಿ ಅನಾಹುತ ಆಗಬಾರದೆಂದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಸೋಲಿನ ಚಿಂತೆ ನನಗಿಲ್ಲ: 1989ರಲ್ಲಿ ಹೆಚ್.ಡಿ.ದೇವೇಗೌಡರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲ್ತಾರೆ. ಅಂದು ನಾನು, ಹೆಚ್.ಡಿ.ರೇವಣ್ಣ ಸೋಲು ಕಂಡಿದ್ದೇವೆ. ಸೋಲು ಎಂಬುವುದು ನಮ್ಮ ಕುಟುಂಬಕ್ಕೆ ಹೊಸತಲ್ಲ. ಸೋಲು-ಗೆಲುವನ್ನು ಸಮಚಿತ್ತವಾಗಿ ತೆಗೆದುಕೊಂಡು ರಾಜಕಾರಣ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ.
ಮಂಡ್ಯದಲ್ಲಿ ಶಾಸಕರು, ಕಾರ್ಯಕರ್ತರ ಮತ್ತು ಪಕ್ಷ ಸಂಘಟನೆಗಾಗಿ ಪುತ್ರ ನಿಖಿಲ್ ಸ್ಪರ್ಧೆ ಮಾಡಿದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೋತ್ತರ ಸಮೀಕ್ಷೆಗಳನ್ನು ತರಿಸಿಕೊಂಡಿಲ್ಲ. ಈ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.