ಬೆಂಗಳೂರು: ಆಪರೇಷನ್ ಕಮಲ ಭೀತಿಯ ಹಿನ್ನೆಲೆಯಲ್ಲಿ ರೆಸಾರ್ಟ್ ಸೇರಿರುವ ಜೆಡಿಎಸ್ ಶಾಸಕರಿಗೆ ಸಿಎಂ ಅಭಯ ನೀಡಿದ್ದು, ಮುಂದಿನ 4 ದಿನ ರೆಸಾರ್ಟ್ ನಲ್ಲಿ ಇರಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಈಗಾಗಲೇ ಶಾಕ್ ನೀಡಿರುವ ಹಿನ್ನೆಲೆಯಲ್ಲಿ ನಿನ್ನೆಯೇ ಜೆಡಿಎಸ್ ಶಾಸಕರನ್ನ ದೇವನಹಳ್ಳಿ ಬಳಿಯ ರೆಸಾರ್ಟಿಗೆ ಶಿಫ್ಟ್ ಮಾಡಲಾಗಿತ್ತು. ಇಂದು ಸಿಎಂ ಅವರು ರೆಸಾರ್ಟಿಗೆ ಭೇಟಿ ನೀಡಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಶಾಸಕರೊಂದಿಗೆ ಮಾತುಕತೆ ನಡೆಸಿದರು.
ಸದ್ಯ ಸ್ಪೀಕರ್ ಅವರು ರಾಜೀನಾಮೆ ನೀಡಿರುವ ಕೆಲ ಶಾಸಕರಿಗೆ ಸಮಯ ನೀಡಿ ಮತ್ತೆ ರಾಜೀನಾಮೆ ನೀಡಲು ಸೂಚನೆ ನೀಡಿರುವುದರಿಂದ ಸಮ್ಮಿಶ್ರ ಸರ್ಕಾರ ನಾಯಕರಿಗೆ ಸರ್ಕಾರ ಉಳಿಸಿಕೊಳ್ಳಲು ಹೆಚ್ಚಿನ ಸಮಯಾವಕಾಶ ಲಭಿಸಿದೆ. ಈ ನಡುವೆ ಮತ್ತೆ ಯಾವುದೇ ಶಾಸಕರು ಆಪರೇಷನ್ಗೆ ಒಳಗಾದ ರೀತಿಯಲ್ಲಿ ಅವರನ್ನು ರೆಸಾರ್ಟಿನಲ್ಲೇ ತಂಗಲು ಸೂಚಿಸಲಾಗಿದೆ. ಇದೇ ವೇಳೆ ಯಾವುದೇ ಕ್ಷಣದಲ್ಲಿ ಏನಾದ್ರು ಆಗಬಹುದು ನೀವು ಒಗ್ಗಟ್ಟಿನಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ.
ಸ್ಪೀಕರ್ ಅವರ ನಡೆಯಿಂದ ಸದ್ಯ ಜೆಡಿಎಸ್ ನಾಯಕರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರಿಗೆ ಒಗ್ಗಟ್ಟಿನಿಂದ ಇರಲು ಸಿಎಂ ಕರೆ ನೀಡಿದ್ದಾರೆ. ಇತ್ತ ರೆಸಾರ್ಟಿನಿಂದ ಮತ್ತೆ ಬೆಂಗಳೂರಿಗೆ ಮರಳಿರುವ ಸಿಎಂ, ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಕೃಷ್ಣ ಜಲಭಾಗ್ಯ ನಿಗಮ ಕುರಿತ ಸಾಮಾನ್ಯ ಸಭೆ ಇದ್ದಾಗಿದ್ದು, ಸಭೆಯಲ್ಲಿ ಕೆಲ ಅಧಿಕಾರಿಗಳು ಸೇರಿ ನಿಗಮ ನಿರ್ದೇಶಕರು ಭಾಗವಹಿಸಿದ್ದರು.