ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೋಮವಾರ ಬಹುಮತ ಗೆಲ್ಲುವುದು ಬಹುತೇತ ಖಚಿತವಾಗಿದೆ. ಯಾಕಂದರೆ ಬಹುಮತ ಸಾಬೀತು ವೇಳೆ ನಾವೂ ಬರಲ್ಲ ಎಂದು ಅತೃಪ್ತರು ಮುಂಬೈನಲ್ಲೇ ಪಟ್ಟು ಹಿಡಿದು ಕುಳಿತಿದ್ದಾರೆ.
ಹೌದು. ಸ್ಪೀಕರ್ ಅವರು ಇನ್ನೂ ಕೂಡ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸದನಕ್ಕೆ ಹಾಜರಾಗದಿರಲು ನಿರ್ಧರಿಸಿದ್ದು, ಅತೃಪ್ತ ಶಾಸಕರೆಲ್ಲರೂ ಗೈರು ಹಾಜರಾದರೆ ಬಿಎಸ್ವೈ ಬಹುಮತ ಗೆಲ್ಲುವುದು ಪಕ್ಕಾ ಆಗಿದೆ.
ಮುಂಬೈನಲ್ಲೆ ಉಳಿದುಕೊಂಡರೆ ಸದನಕ್ಕೆ ತಮ್ಮ ಗೈರಿನಿಂದ ದೋಸ್ತಿಗಳ ಸಂಖ್ಯೆ ಕಡಿಮೆಯಾಗುವುದಲ್ಲದೇ ಬಿಜೆಪಿ ಬಹುಮತ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಬಿಎಸ್ವೈ ಬಹುಮತ ಸಾಬೀತು ಮಾಡುವವರೆಗೂ ಅತೃಪ್ತರು ಯಾರನ್ನೂ ಭೇಟಿಯಾಗದಿರಲು ನಿರ್ಧರಿಸಿದ್ದಾರೆ. ಬಿಎಸ್ವೈ ಬಹುಮತ ಗೆದ್ದ ನಂತರವಷ್ಟೇ ಅಂದರೆ ಸೋಮವಾರ ಇಲ್ಲವೇ ಮಂಗಳವಾರ ಅತೃಪ್ತರು ರಾಜ್ಯಕ್ಕೆ ಮರಳಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶುಕ್ರವಾರ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರಲ್ಲಿ ಯಾವ ರೀತಿ ಮಂದಹಾಸ ಮೂಡಿದೆಯೋ ಅದೇ ರೀತಿ ಅತೃಪ್ತ ಶಾಸಕರಲ್ಲೂ ಮೂಡಿದ್ದು, ನಾವು ಗೆದ್ದೆವು ಎಂದು ಸಂತಸ ಪಟ್ಟಿದ್ದರು.
ಮುಂಬೈನಲ್ಲಿರುವ ಅತೃಪ್ತ ಶಾಸಕರು ಸಂಜೆ ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದಲ್ಲಿ ವಿಜಯದ ಸಂಕೇತವಾಗಿ ಕುಂಕುಮವನ್ನು ಧರಿಸಿ ಪರಸ್ಪರ ಸಂತಸ ಹಂಚಿಕೊಂಡಿದ್ದರು. ನಾವು ಅಂದುಕೊಂಡಂತೆ ಎಲ್ಲ ನಡೆದಿದ್ದು, ಯಾವುದೂ ಹುಸಿಯಾಗಿಲ್ಲ ನಾವು ಗೆದ್ದಿದ್ದೇವೆ ಎಂದು ಸಂಭ್ರಮಿಸಿದ್ದರು.