ಬೆಂಗಳೂರು: ಕೊರೊನಾ ವೈರಸ್ ಪರಿಣಾಮದಿಂದ ಕಳೆದ ಕೆಲವು ದಿನಗಳಿಂದಲೂ ಸಿಎಂ ಯಡಿಯೂರಪ್ಪ ಅವರ ಧವಳಗಿರಿ ನಿವಾಸ ಸ್ತಬ್ಧವಾಗಿದೆ. ಇವತ್ತೂ ಕೂಡ ಸಿಎಂ ನಿವಾಸ ಸ್ತಬ್ಧವಾಗಿತ್ತಲ್ಲದೇ, ಸಿಎಂ ಭೇಟಿಗೆ ಸಾರ್ವಜನಿಕರಿಗೆ ನಿರ್ಬಂಧ ಮುಂದುವರೆದಿತ್ತು. ಇಂದು ಯಾರನ್ನು ಭೇಟಿಯಾಗದಿರಲು ಸಿಎಂ ಯಡ ನಿರ್ಧರಿಸಿದ್ದಾರೆ.
ಸಿಎಂ ಭೇಟಿಗೆ ಬರುತ್ತಿರುವ ಒಂದಷ್ಟು ಜನರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಸಿಎಂ ಇಂದು ಯಾರನ್ನು ಭೇಟಿ ಯಾಗುವುದಿಲ್ಲವೆಂದು ಪೊಲೀಸರು ಹೇಳಿ ವಾಪಸ್ ಕಳಿಸುತ್ತಿದ್ದಾರೆ. ಅಲ್ಲದೆ ತಮ್ಮ ಭದ್ರತಾ ಸಿಬ್ಬಂದಿ ಟೀಂ ಗೂ ರೆಸ್ಟ್ ಕೊಟ್ಟಿರುವ ಸಿಎಂ, ಕೇವಲ ಕೆಲವೊಂದಿಷ್ಟು ಮಂದಿಯಿಂದ ಮಾತ್ರ ಸಿಎಂ ಮನೆಗೆ ಭದ್ರತೆ ನೀಡಲಾಗಿದೆ. ಮಾಸ್ಕ್ ಧರಿಸಿ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದಾರೆ.
ಭಾನುವಾರ ಸಿಎಂ ಜನತಾ ಕರ್ಫ್ಯೂ ಪಾಲನೆ:
ಜನತಾ ಕಫ್ರ್ಯೂ ಹಿನ್ನೆಲೆ ನಾಳೆ ಇಡೀ ದಿನ ಧವಳಗಿರಿ ನಿವಾಸದಲ್ಲೆ ಇದ್ದು, ಜನತಾ ಕರ್ಫ್ಯೂ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಳನ್ನು ಸಿಎಂ ಯಡಿಯೂರಪ್ಪ ಸಹ ಪಾಲಿಸಲಿದ್ದಾರೆ. ನಾಳೆ ಸಂಜೆ 5ಕ್ಕೆ ಕೊರೊನಾ ತಡೆಯುವಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಚಪ್ಪಾಳೆ ಮೂಲಕ ಧನ್ಯವಾದ ಅರ್ಪಿಸಲಿದ್ದಾರೆ. ಧವಳಗಿರಿ ನಿವಾಸದ ಬಾಲ್ಕನಿ ಅಥವಾ ಗೇಟ್ ಬಳಿಯಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ಸಲ್ಲಿಸಲಿದ್ದಾರೆ.
ಎಲ್ಲಾ ಶಾಸಕರು, ಮಂತ್ರಿಗಳು ನಾಳೆ ನಿಮ್ಮ ನಿಮ್ಮ ಮನೆಗಳಲ್ಲೇ ಇರಿ ಎಂದು ಸಿಎಂ ಯಡಿಯೂರಪ್ಪ ಇದೇ ವೇಳೆ ಸೂಚಿಸಿದ್ದಾರೆ. ಹಾಗೆಯೇ ಸಿಎಂ ನಿವಾಸಕ್ಕೆ ಸಚಿವರು, ಶಾಸಕರಿಗೂ ಪ್ರವೇಶ ನಿರ್ಬಂಧ ಮಾಡಲಾಗಿದೆ. ಪ್ರೊಟೋಕಾಲ್ ಅಧಿಕಾರಿಗಳು, ಸಿಬ್ಬಂದಿ ಬಿಟ್ಟು ಮತ್ಯಾರಿಗೂ ಪ್ರವೇಶ ಇರುವುದಿಲ್ಲ ಎಂದು ಸಚಿವರು ಶಾಸಕರಿಗೆ ಈಗಾಗಲೇ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.