-ಕಾಲೇಜು ದಿನಗಳಲ್ಲೇ ಹೋರಾಟ. ಪ್ರತಿಭಟನೆಗೆ ಇಳಿದಿದ್ದೆ
ಹುಬ್ಬಳ್ಳಿ: ನಾನು ಮುಖ್ಯಮಂತ್ರಿ ಆಗಿದ್ದು ದೈವಇಚ್ಚೆ. ಕಾಲೇಜಿನ ರಿಜಿಸ್ಟರ್ ನಲ್ಲಿ ಬಸವರಾಜ ಬೊಮ್ಮಾಯಿ ಎಂದು ಇರುವುದು ಹಾಗೆ ಇರಬೇಕು. ನಮ್ಮ ಹಾಜರಿ ಕಾಲೇಜಿನ ರಿಜಸ್ಟರ್ ಗಿಂತ ಕ್ಯಾಂಟೀನ್ನಲ್ಲೇ ಹೆಚ್ಚಾಗಿರುತ್ತಿತ್ತು ಎಂದು ತಮ್ಮ ಕಾಲೇಜು ದಿನಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ತಾವೂ ಕಲಿತ ಬಿ.ವಿ. ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ ಪಾರ್ಕ್ ಉದ್ಘಾಟಿಸಿ ಕೆಎಲ್ಇ ಸಂಸ್ಥೆಯ 75ನೇ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಮುಖ್ಯಮಂತ್ರಿ ಬೊಮ್ಮಾಯಿ ಎಂದು ಕರೆಯುವ ಬದಲು ಬಸವರಾಜ ಬೊಮ್ಮಾಯಿ ಎಂದು ಕರೆದರೆ ಖುಷಿ. ಕಾಲೇಜು ವಿದ್ಯಾಭ್ಯಾಸ ಮಾಡುವ ವೇಳೆ ನಡೆದ ಘಟನೆಗಳ ಸವಿನೆನಪುಗಳನ್ನು ಎಲ್ಲರ ಜೊತೆ ಶೇರ್ ಮಾಡಲು ಬಯಸಿದ ಅವರು, ನಾನು ಕಲಿತ ಕಾಲೇಜಿನಲ್ಲಿ ಇಂದು ಸಿಎಂ ಆಗಿ ಭಾಗವಹಿಸಿ ಮಾತನಾಡಲು ಬಂದಿರುವೆ ಎಂದು ನುಡಿದರು. ಇದನ್ನೂ ಓದಿ: ಆರ್ ಆ್ಯಂಡ್ ಡಿ ಹೊಸ ನೀತಿ ರೂಪಿಸಲು ಕಾರ್ಯಪಡೆ ರಚನೆ: ಬಸವರಾಜ ಬೊಮ್ಮಾಯಿ
ನಾನು ಈ ಹಿಂದೆ ಸರ್ಕಾರದಲ್ಲಿ ನೀರಾವರಿ, ಗೃಹ ಸಚಿವ ಆದಾಗಲೂ ಬಂದಿದ್ದೆ ಕಾಲೇಜಿಗೆ ಬಂದಿದ್ದೆ. ಆದರೆ ಇದೀಗ ಸಿಎಂ ಆಗಿ ಬಂದಿರುವೆ. ನಾನು ಓದಿದ ಸರಸ್ವತಿ ಮಂದಿರದಲ್ಲಿ ಮಾತನಾಡಲು ಇಂದು ನನಗೆ ಕಷ್ಟ ಆಗುತ್ತಿದೆ, ನನಗೆ ಎದೆ ತುಂಬಿ ಬಂದಿದೆ. ಹಳೆಯ ಸ್ನೇಹಿತರು, ಪ್ರಾಧ್ಯಾಪಕರು, ಹಾಸ್ಟೆಲ್, ಹಾಸ್ಟೆಲ್ ರೂಮ್, ಲ್ಯಾಬ್, ಪ್ರಯೋಗ ಮಾಡದೇ ಇರುವ ಲ್ಯಾಬ್ಗಳು ಇಂದಿಗೂ ನೆನಪಿಗೆ ಬರುತ್ತಿದೆ. ಹಳೆಯ ದಿನಗಳು ಬಹಳ ಚೆನ್ನಾಗಿತ್ತು. ನಮ್ಮ ಅತೀ ಹೆಚ್ಚು ಹಾಜರಿ ಕ್ಯಾಂಟೀನ್ನಲ್ಲಿ ಇರುತ್ತಿತ್ತು. ಹೀಗಾಗಿ ಕ್ಯಾಂಟೀನ್ ಮಾಲೀಕರು ನಮ್ಮೊಂದಿಗೆ ಯಾವಾಗ ಪಾಸ್ ಆಗಿ ಹೋಗುತ್ತೀರಾ ಎಂದು ರೇಗಿಸುತ್ತಿದ್ದರು ಎಂದು ಕಾಲೇಜು ನೆನಪುಗಳನ್ನು ನೆನಪಿಸಿಕೊಂಡರು.
ಕಾಲೇಜು ದಿನಗಳಲ್ಲಿ ಲೋಕೋಪಯೋಗಿ ನೇಮಕಾತಿ ವಿಚಾರದಲ್ಲಿ ನಾವೂ ನಾಲ್ಕು ತಿಂಗಳ ಕಾಲ ಪ್ರತಿಭಟನೆ ಮಾಡಿದ್ದೇವೆ. ಅದಕ್ಕಾಗಿ ನಮ್ಮದೊಂದು ಸೆಮಿಸ್ಟರ್ ಹೋಯ್ತು. ಇಂದು ಹುಬ್ಬಳ್ಳಿಯ ಬಿವಿಬಿ ವಿವಿಯನ್ನು ನೋಡುತ್ತಾ ಇದ್ದರೆ, ಮತ್ತೆ ಕಾಲೇಜು ಶಿಕ್ಷಣ ಕಲಿಯಬೇಕು ಅನಿಸುತ್ತಿದ್ದೆ ಎಂದು ಕಾಲೇಜು ದಿನಗಳ ಹೋರಾಟ, ಸವಿನೆನಪುಗಳನ್ನು ಮತ್ತೆ ಸ್ಮರಿಸಿಕೊಂಡರು. ಇದನ್ನೂ ಓದಿ: ಸಿಎಂ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಮಕ್ಕಳ ಬಳಕೆ – ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ
ಕಾಯಕವೇ ಕೈಲಾಸ ಅಂದುಕೊಂಡಿರುವವನು ನಾನು, ಕಾಯಕವೇ ಕೈಲಾಸ ಅಂದುಕೊಂಡು ಇಂದು ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಮ್ಮ ಮನಸ್ಸು ಸ್ವಚ್ಛವಾಗಿದ್ರೆ ಕಟ್ಟ ಕಡೆಯ ಮನುಷ್ಯನವರೆಗೂ ತಲುಪಬಹುದು. ನಾವೂ ಇಂದು ಅರಿವಿನಿಂದ ಕೆಲಸ ಮಾಡಬೇಕಿದೆ ಎಂದರು.
ಬೊಮ್ಮಾಯಿ ತಮ್ಮ ಕಾಲೇಜು ವಿದ್ಯಾಭ್ಯಾಸದ ದಿನಗಳನ್ನು ನೆನೆದು ಭಾವುಕರಾಗಿ ಹಳೆಯ ಸ್ನೇಹಿತರು, ಪ್ರಾಧ್ಯಾಪಕರು ಸೇರಿದಂತೆ ಹಿಂದಿನ ದಿನಗಳ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಎಲ್ಲರನ್ನು ನೆನೆದು ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಹೆತ್ತ ಮಗಳನ್ನೇ ಕೊಂದ ತಂದೆ, ತಾಯಿ, ದೊಡ್ಡಪ್ಪ – ಮರ್ಯಾದಾ ಹತ್ಯಾ ಪ್ರಕರಣ ಬಯಲು