– ಯೇಸು ಪ್ರತಿಮೆ ವಿವಾದಕ್ಕೆ ಪ್ರತಿಕ್ರಿಯಿಸಲು ಸಿಎಂ ನಕಾರ
ಚಿಕ್ಕಬಳ್ಳಾಪುರ: ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರ ಸೆಲ್ಫಿಗೆ ಪೋಸ್ ಕೊಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ತುಟಿ ಸಹ ಬಿಚ್ಚದೆ ಹೊರಟು ಹೋದ ಪ್ರಸಂಗ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆಯಿತು.
ದೊಡ್ಡಬಳ್ಳಾಪುರ ಹೊರವಲಯದ ಡಾ.ಅನಿಬೆಸೆಂಟ್ ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ 28ನೇ ಸ್ಕೌಟ್ಸ್ ಅಂಡ್ ಗೈಡ್ಸ್ ಜಾಂಬೋರೇಟ್ಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಕಾರ್ಯಕ್ರಮ ಮುಗಿದ ನಂತರ ಬೆಂಗಳೂರಿನತ್ತ ಹೊರಟ ಸಿಎಂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಿಎಂ ಸರ್ ಅಂತ ಕೂಗಿದರೂ ಕೇಳಿಯೂ ಕೇಳದಂತೆ ಬಿ.ಎಸ್.ಯಡಿಯೂರಪ್ಪ ಅವರು ಕಾರು ಹತ್ತಿದರು. ಆದರೆ ಕಾರು ಹತ್ತಿದ ಮೇಲೆ ಅಲ್ಲಿಗೆ ಬಂದ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಸಾರ್ ಒಂದು ಸೆಲ್ಫಿ ಅಂದಿದ್ದೇ ತಡ ನಸುನಗುತ್ತಾ ಸಿಎಂ ಸೆಲ್ಫಿಗೆ ಪೋಸ್ ಕೊಟ್ಟರು. ಹೀಗಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಯೇಸು ಪ್ರತಿಮೆ ವಿವಾದಕ್ಕೆ ಪ್ರತಿಕ್ರಿಯಿಸದೇ ಇರಲು ಸಿಎಂ ಅಂತರ ಕಾದುಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.
ಬಸವಳಿದಂತೆ ಭಾಸವಾದ ಸಿಎಂ:
ಸಂಜೆ 4 ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಅವರು ಯಾಕೋ ಒಂಥರ ಬಸವಳಿದಂತೆ ಕಂಡು ಬಂದರು. ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಕ್ರೀಯಾಶೀಲರಾಗಿ ಇರಬೇಕಾದ ಸಿಎಂ ಯಾಕೋ ಏನೋ ಯಾರ ಜೊತೆಯೂ ಬಹಳಷ್ಟು ಮಾತನಾಡದೆ ಮೌನಿಯಾಗಿದ್ದರು. ಯಾರಾದರು ಮಾತನಾಡಿದರೆ ಅಷ್ಟೇ ಮಾತನಾಡಿ ಸುಮ್ಮನಾಗುತ್ತಿದ್ದರು. ಸಿಎಂ ಯಡಿಯೂರಪ್ಪ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಂತೆ ಕಂಡುಬಂತು. ಇತ್ತ ಮಾಜಿ ಸಚಿವ ಯುಟಿ ಖಾದರ್ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಮವಸ್ತ್ರ ಧರಿಸಿ ಕುಳಿತಿದ್ದರು. ಸಿಎಂ ಸೌಜನ್ಯಕ್ಕಾದರೂ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಶಿಸ್ತು ಸಂಯಮದಿಂದ ಬಹಳಷ್ಟು ಸಮಯ ಕೂತಿದ್ದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. 5 ನಿಮಿಷ ಭಾಷಣ ಮಾಡಿದ ಅವರು, ರಾಜ್ಯದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಗೆ 10 ಕೋಟಿ ರೂಪಾಯಿಗಳ ಅನುದಾನ ಕೊಡುವ ಭರವಸೆ ನೀಡಿದರು. ಸಂಜೆ 5:30ರ ನಂತರ ಕಾರ್ಯಕ್ರಮದಿಂದ ನಿರ್ಗಮಿಸಿದರು.