ಬೆಳಗಾವಿ: ರಾಜ್ಯದಲ್ಲಿ ನೆರೆಯಿಂದ ಉಂಟಾಗಿರುವ ಬೆಳೆಹಾನಿ ಪರಿಹಾರಕ್ಕೆ ಹಣ ನೀಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪರು ಪರೋಕ್ಷವಾಗಿ ಹೇಳಿದ್ದಾರೆ.
ಇಂದು ಬೆಳಗಾವಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಿಎಂ ಬಿಎಸ್ವೈ ಅವರ ನೇತೃತ್ವದಲ್ಲಿ ಪ್ರವಾಹ ಪರಿಹಾರ ಕಾರ್ಯಗಳ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ ಅವರು ಬೆಳೆಹಾನಿಯಾಗಿರುವ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿದರು. ಈ ಪ್ರಶ್ನೆಗೆ ಅಸಹಾಯಕ ಉತ್ತರ ನೀಡಿದ ಸಿಎಂ, ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ. ಕೇಂದ್ರದ ನಿಯಮಗಳ ಅನ್ವಯ ಬೆಳೆಹಾನಿ ಪರಿಹಾರ ನೀಡುತ್ತೇವೆ ಎಂದು ಉತ್ತರಿಸಿದರು. ಆದರೂ ಶಾಸಕರು ಒತ್ತಾಯ ಮಾಡಿ, ಕೇಂದ್ರ ಸರ್ಕಾರ ನೀಡಿದ ಹಣದ ಜೊತೆಗೆ ರಾಜ್ಯ ಸರ್ಕಾರದ ಹಣ ಸೇರಿಸಿ ಕೊಡಿ ಎಂದು ಮನವಿ ಮಾಡಿದರು.
ಈ ವೇಳೆ ಶಾಸಕರಿಗೆ ಉತ್ತರಿಸಿದ ಸಿಎಂ ಬಿಎಸ್ವೈ, ನೋಡು ಆನಂದ ಮಾಮನಿ ನಿನಗೆ ಸೂಕ್ಷ್ಮವಾಗಿ ಹೇಳುತ್ತಿದ್ದೇನೆ. ಬೆಳೆಹಾನಿ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಯಮಗಳ ಅಡಿ ನೀಡುವ ಹಣವನ್ನು ನೀಡುತ್ತೇನೆ. ರಾಜ್ಯದಿಂದ ಹೆಚ್ಚುವರಿಯಾಗಿ ಬೆಳೆಹಾನಿಗೆ ನೀಡಲು ಹಣ ಎಲ್ಲಿದೆ. ಇನ್ನು 2-3 ದಿನಗಳಲ್ಲಿ ಕೇಂದ್ರದಿಂದ ಹಣ ಬಿಡುಗಡೆಯಾಗುತ್ತದೆ. ಶೀಘ್ರವೇ ಎಲ್ಲರಿಗೂ ಹಣ ಬಿಡುಗಡೆ ಮಾಡುತ್ತೇವೆ ಎಂದರು.
ಸಿಎಂ ಅವರ ಮಾತಿಗೆ ಸಮಾಧಾನಗೊಳ್ಳದ ಶಾಸಕರು, ಅನ್ನ ನೀಡಿರುವ ರೈತರಿಗೆ ನಾವು ಹಣ ನೀಡಿದ್ದರೆ ಮೋಸ ಮಾಡಿದಂತಾಗುತ್ತದೆ. ಆದ್ದರಿಂದ ಬೆಳೆಹಾನಿ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಒತ್ತಾಯ ಮಾಡಿದರು.