ಚೆನ್ನೈ: ಸಹಪಾಠಿಗಳು ತನ್ನ ಬೋರ್ಡ್ ಪರೀಕ್ಷೆಯ ಹಾಲ್ ಟಿಕೆಟ್ ಹರಿದರು ಎಂಬ ಕಾರಣಕ್ಕೆ ಮನನೊಂದು 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.
17 ವರ್ಷ ವಯಸ್ಸಿನ ತಮಿಳರಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ದೇವೀರಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ತಮಿಳರಸಿ ಮಂಗಳವಾರದಂದು ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತಮಿಳರಸಿ ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕಿತ್ತು. ಆದ್ರೆ ಶಾಲೆಯಲ್ಲಿ ಇಬ್ಬರು ಹುಡುಗರು ಆಕೆಯ ಹಾಲ್ ಟಿಕೆಟ್ ಹರಿದು ಹಾಕಿದ್ದರು. ಅವರಲ್ಲೊಬ್ಬ ತಮಿಳರಸಿಗೆ ತನ್ನ ಪ್ರೀತಿಯನ್ನ ಒಪ್ಪಿಕೊಳ್ಳುವಂತೆ ಕಿರುಕುಳ ನೀಡುತ್ತಿದ್ದ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಹಾಲ್ ಟಿಕೆಟ್ ಹರಿದ ಹಿನ್ನೆಲೆಯಲ್ಲಿ ತನ್ನ ಭವಿಷ್ಯ ಹಾಳಾಯಿತು ಎಂದು ಮನನೊಂದು ತಮಿಳರಸಿ ಮನೆಗೆ ಹೋಗಿ ನೇಣು ಬಿಗಿದುಕೊಂಡಿದ್ದಾಳೆ. ಆಕೆಯನ್ನ ಅಕ್ಕಪಕ್ಕದ ಮನೆಯವರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರಾದ್ರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ಹೇಳಿದ್ದಾರೆ. ವಿದ್ಯಾರ್ಥಿನಿಯ ಕುಟುಂಬಸ್ಥರು ಇಬ್ಬರು ಹುಡುಗರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ತಮಿಳರಸಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಹುಡುಗ, ತನ್ನ ಪ್ರೀತಿಯನ್ನ ಒಪ್ಪಿಕೊಳ್ಳದಿದ್ದರೆ ಆಕೆಯ ಮೇಲೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಎಂದು ವಿದ್ಯಾರ್ಥಿನಿಯ ಕುಟುಂಬಸ್ಥರೊಬ್ಬರು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.