ಉಡುಪಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕೇವಲ ಮುಸಲ್ಮಾನರ ವಿರುದ್ಧ ಅಲ್ಲ, ಈ ಕಾಯ್ದೆಯ ಮೂಲಕ ಬಿಜೆಪಿ ಹಿಂದೂಗಳ ಬೆನ್ನಿಗೆ ಹಾಗೂ ಮುಸಲ್ಮಾನರ ಎದೆಗೆ ಚೂರಿ ಇರಿದಿದೆ. ದೇಶದ ಎಲ್ಲರೂ ಒಂದಾಗದಿದ್ದರೆ ಉಳಿಗಾಲವಿಲ್ಲ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಉಡುಪಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಉಡುಪಿಯಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾದ್ರು. ಜಿಲ್ಲಾ ಮುಸ್ಲಿಂ ಒಕ್ಕೂಟ ನೇತೃತ್ವದಲ್ಲಿ ಹತ್ತಾರು ಸಮಾನ ಮನಸ್ಕ ಸಂಘಟನೆಗಳೂ ಭಾಗವಹಿಸಿದ್ದವು. ಈ ವೇಳೆ ದಿಕ್ಸೂಚಿ ಭಾಷಣ ಮಾಡಿದ ಪ್ರಗತಿಪರ ಹೋರಾಟಗಾರ ಶಿವಸುಂದರ್, ಕಾಯ್ದೆ ಪ್ರಕಾರ ಈ ದೇಶದ ಮುಸಲ್ಮಾನರು ವಲಸೆಗಾರರಲ್ಲ. ಹಿಂದೂಗಳು ಈ ದೇಶದ ಮೂಲ ನಿವಾಸಿಗಳೆಂದು ಸಾಬೀತು ಮಾಡಬೇಕಾಗುತ್ತದೆ. ಹೀಗಾಗಿ ಎಲ್ಲರೂ ಇದನ್ನು ವಿರೋಧಿಸುವ ಅಗತ್ಯ ಇದೆ ಎಂದರು. ಮುಸಲ್ಮಾನರಿಗೆ ನೇರ ಚೂರಿ ಇರಿಯುವ ಈ ಮಸೂದೆ, ಹಿಂದೂಗಳ ಬೆನ್ನಿಗೆ ಚೂರಿ ಇರಿಯುತ್ತದೆ ಎಂದರು.
ಎನ್ಆರ್ಸಿಗೂ ಸಿಎಎಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಆದರೆ ನೇರ ಸಂಬಂಧ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದೆ ಚುನಾವಣಾ ಭಾಷಣದಲ್ಲೇ ಹೇಳಿರುವ ದಾಖಲೆಯಿದೆ. ಕಾಯ್ದೆ ವಿರುದ್ಧ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ವಿರೋಧ ಪಕ್ಷದ ಮತದಾರರ ಪೌರತ್ವವನ್ನೇ ಕಿತ್ತುಕೊಂಡು ಬಿಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಎನ್ಆರ್ಸಿ ಮತ್ತು ಸಿಎಎ ಜಾತಿ ತಾರತಮ್ಯದಿಂದ ಕೂಡಿದೆ. ಬೇರೆಲ್ಲ ಧರ್ಮಗಳಿಗೆ ವಿನಾಯಿತಿ ಇದೆ. ಮುಸಲ್ಮಾನರಿಗೆ ಇದರಲ್ಲಿ ಇಲ್ಲ. ಇಸ್ರೇಲ್ ಮಾದರಿಯಲ್ಲಿ ಒಡೆದು ಆಳುವ ನೀತಿಯನ್ನು ಕೇಂದ್ರ ಸರಕಾರ ಅನುಸರಿಸುತ್ತಿದೆ ಎಂದರು.