ಚಿತ್ರದುರ್ಗ: ದೇಶಾದ್ಯಂತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಾರಿ ಸದ್ದು ಮಾಡ್ತಿದೆ. ಹೀಗಾಗಿ ಮುಸಲ್ಮಾನರು ಕೂಡ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟಿಸಲು ಸಹ ಸಜ್ಜಾಗುತಿದ್ದಾರೆ. ಹೀಗಿರುವಾಗಲೇ ಕೋಟೆನಾಡು ಚಿತ್ರದುರ್ಗ ನಗರಕ್ಕೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ನೀಡಿದ್ದಾರೆ.
ಹಲವು ವರ್ಷಗಳ ಬಳಿಕ ಕೋಟೆನಾಡು ಚಿತ್ರದುರ್ಗಕ್ಕೆ ಇಂದು ಸಂಜೆ ಆಗಮಿಸಿದ್ದ ಮೋಹನ್ ಭಾಗವತ್ ಅವರು ವಿಶ್ವಹಿಂದೂ ಪರಿಷತ್ ಪ್ರಾಂತ ಸಮಿತಿ ಸದಸ್ಯ ರಾಮಮೂರ್ತಿಯವರ ಮನೆಗೆ ಬಂದಿದ್ದರು. ಈ ವೇಳೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ರಾಮಮೂರ್ತಿಯವರ ಆರೋಗ್ಯ ವಿಚಾರಿಸಿದರು ಎನ್ನಲಾಗಿದೆ.
ಇದೇ ವೇಳೆ ಆರ್ಎಸ್ಎಸ್ ಕೆಲ ಜಿಲ್ಲಾ ಪ್ರಮುಖ ಮುಖಂಡರ ಜತೆ ಗೌಪ್ಯ ಸಮಾಲೋಚನೆ ಸಹ ನಡೆಸಿದ್ದಾರೆ. ಇದರಿಂದಾಗಿ ಸಂಪೂರ್ಣ ತಟಸ್ಥವಾಗಿದ್ದ ಕೋಟೆನಾಡಿನ ಸಂಘ ಪರಿವಾರದ ಮುಖಂಡರಲ್ಲಿ ಮತ್ತೆ ಉತ್ಸಾಹ ಗರಿಗೆದರಿದ್ದೂ ಸಂಘದ ಚಟುವಟಿಕೆಗಳು ಮತ್ತೊಷ್ಟು ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ. ಈ ವೇಳೆ ಬಿಜೆಪಿ ಶಾಸಕರಾದ ಚಂದ್ರಪ್ಪ, ತಿಪ್ಪಾರೆಡ್ಡಿ ಸಹ ಹಾಜರಿದ್ದು ಭಾಗವತ್ ಅವರನ್ನು ಸ್ವಾಗತಿಸಿದ್ರು. ಆದರೆ ಸಭೆಗೆ ಶಾಸಕರು ಭಾಗಿಯಾಗಿರಲಿಲ್ಲ. ಸಭೆ ಮುಗಿದ ಬಳಿಕ ಮೋಹನ್ ಭಾಗವತರಿಗೆ ಶಾಸಕರು ಅಭಿನಂದನೆ ಸಲ್ಲಿಸಿ ಬೀಳ್ಕೊಟ್ಟರು.