ಚಿತ್ರದುರ್ಗ: ರೋಗಿಗೆ ಔಷಧಿ ನೀಡುವಾಗ ಒಂದು ಡೋಸ್ ಹೆಚ್ಚು ಅಥವಾ ಕಡಿಮೆ ಆದರೂ ರೋಗಿಯ ಜೀವವೇ ಹೋಗಿರೋ ಹಲವು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಡಿ ದರ್ಜೆ ಮಹಿಳಾ ನೌಕರರು ಫಾರ್ಮಾಸಿಸ್ಟ್ ಗಳಂತೆ ಔಷಧಿ ವಿತರಿಸುವ ಮೂಲಕ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ.
ಮೊನ್ನೆ ಮೊನ್ನೆಯಷ್ಟೇ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯಕ್ಕಾಗಿ ಹೈಟೆಕ್ ಸೌಲಭ್ಯಗಳನ್ನು ಕಲ್ಪಿಸಿ ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು ವಿವಾದಕ್ಕೆ ತುತ್ತಾಗಿದ್ದರು. ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ರಾಮುಲು ಹೈಟೆಕ್ ವಾಸ್ತವ್ಯವನ್ನು ರದ್ದು ಮಾಡಿದ್ದರು. ಇದೀಗ ಇದೆ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಬಯಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಆಸ್ಪತ್ರೆ ಹೆಚ್ಚು ಕಡಿಮೆ 1000 ಹಾಸಿಗೆಗಳು ಇರುವ ದೊಡ್ಡ ಆಸ್ಪತ್ರೆಯಾಗಿದೆ. ಇಲ್ಲಿ ನಿತ್ಯ ಸಾವಿರಾರು ಬಡ ರೋಗಿಗಳು ಟ್ರೀಟ್ಮೆಂಟ್ಗೆಂದು ಬರುತ್ತಿದ್ದು, 11 ಮಂದಿ ತಜ್ಞ ವೈದ್ಯರು ಕೂಡ ಇದ್ದಾರೆ. ಉತ್ತಮವಾಗಿ ಟ್ರೀಟ್ಮೆಂಟ್ ಕೂಡ ಕೊಡುತ್ತಿದ್ದಾರೆ. ಆದರೆ ಇಲ್ಲಿನ ಔಷಧಿ ವಿತರಣೆ ಕೇಂದ್ರದಲ್ಲಿ ಫಾರ್ಮಸಿಸ್ಟ್ ಇಲ್ಲ. ಇಲ್ಲಿ ರೋಗಿಗಳಿಂದ ಸ್ಲಿಪ್ ಪಡೆದು ಮಾತ್ರೆ ಟಾನಿಕ್ ಕೊಡೋದು ಡಾ.ಕಸ ಗುಡಿಸಮ್ಮ. ಆಶ್ಚರ್ಯ ಅನ್ನಿಸದ್ರೂ ಇದು ಸತ್ಯ. ಡಿ ದರ್ಜೆಯ ನೌಕರರಾಗಿರೋ ಮಹಿಳೆ ಇಲ್ಲಿ ಔಷಧಿ ವಿತರಣೆ ಮಾಡುತ್ತಿದ್ದಾರೆ. ಇದನ್ನು ನೋಡಿ ಬಡ ರೋಗಿಗಳು ಔಷಧಿ ತಗೋಬೇಕೋ ಬೇಡ್ವೋ..? ಏನಾಗುತ್ತೋ ಏನೋ..? ಎಂಬ ಭಯ ಆತಂಕದಲ್ಲಿ ಮುಂದೆ ಸಾಗುತ್ತಾರೆ. ಈ ವಿಚಾರವನ್ನು ಆರೋಗ್ಯ ಸಚಿವರು ಗಮನಿಸಿ ತುರ್ತಾಗಿ ಫಾರ್ಮಸಿಸ್ಟ್ ನೇಮಕ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಆದರೆ ಮಾತ್ರೆ ವಿತರಣೆಗೆ ಕೂತಿರೋ ಮಹಿಳೆಯದ್ದು ಏನೂ ತಪ್ಪಿಲ್ಲ. ಯಾಕಂದರೆ ಈಕೆಯನ್ನು ವೈದ್ಯಾಧಿಕಾರಿಗಳೇ ಇಲ್ಲಿ ಕೂರಿಸಿ ಔಷಧಿ ವಿತರಿಸಮ್ಮ ಅಂತ ಹೇಳಿದ್ದಾರೆ. ಆದರೆ ತಪ್ಪು ಮಾಡಿದೆ ಎಂದು ವೈದ್ಯಾಧಿಕಾರಿ ಬಸವರಾಜ್ ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾರೆ. ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿ ಜಾರಿಕೊಳ್ಳುತ್ತಾರೆ.