ಚಿತ್ರದುರ್ಗ: ಬೈಕಿಗೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಶಾಲೆಗೆ ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಗರದ ಜೆಎಮ್ಐಟಿ ವೃತ್ತದ ಬಳಿ ನಡೆದಿದೆ.
ಅಮೃತ (14) ಅಪಘಾತದಲ್ಲಿ ಮೃತಪಟ್ಟ ಬಾಲಕಿಯಾಗಿದ್ದು, ಘಟನೆಯಲ್ಲಿ ಬಾಲಕಿಯ ಸಹೋದರಿ ಹಾಗೂ ಬೈಕ್ ಓಡಿಸುತ್ತಿದ್ದ ಸಂಬಂಧಿ ಕೃಷ್ಣಾರೆಡ್ಡಿ ಎಂಬವರು ಗಾಯಗೊಂಡಿದ್ದಾರೆ.
ಚಿಕ್ಕಪೇಟೆ ಬಡಾವಣೆಯ ನಿವಾಸಿಗಳಾದ ಸಹೋದರಿಯರನ್ನ ಶಾಲೆಯ ಬಳಿ ಡ್ರಾಪ್ ಮಾಡಲು ಸಂಬಂಧಿ ಕೃಷ್ಣಾರೆಡ್ಡಿ ಅವರು ಬೈಕಿನಲ್ಲಿ ಕರೆತರುತ್ತಿದ್ದರು. ನಗರದ ಜೆಎಮ್ಐಟಿ ವೃತ್ತದ ಬಳಿ ಆಗಮಿಸಿದ ವೇಳೆ ಕೃಷ್ಣಾರೆಡ್ಡಿ ಬೈಕನ್ನು ಯೂಟರ್ನ್ ಮಾಡಲು ಯತ್ನಿಸಿದ್ದಾರೆ. ಈ ಹಂತದಲ್ಲಿ ಅವರ ಎದುರಿಗೆ ಕ್ಯಾಂಟರ್ ವಾಹನವೊಂದು ಬಂದಿದ್ದು, ಪರಿಣಾಮ ನಿಧಾನವಾಗಿ ಚಾಲನೆ ಮಾಡಿದ್ದಾರೆ. ಆದರೆ ಕ್ಯಾಂಟರ್ ಹಿಂದಿನಿಂದ ಬಂದ ಖಾಸಗಿ ಬಸ್ ವೇಗವಾಗಿ ಬಂದಿದ್ದರಿಂದ ಬೈಕಿಗೆ ಡಿಕ್ಕಿಯಾಗಿತ್ತು. ಈ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೈಕ್ ಯೂಟರ್ನ್ ತೆಗೆದುಕೊಳ್ಳುತ್ತಿರುವಾಗ ಕ್ಯಾಂಟರ್ ಅಡ್ಡಬಂದ ಪರಿಣಾಮ ಕೃಷ್ಣಾರೆಡ್ಡಿಗೆ ಬಸ್ ಕಾಣಿಸಿಲ್ಲ. ಇತ್ತ ನಿಧಾನವಾಗಿ ಯೂಟರ್ನ್ ತೆಗೆದುಕೊಳ್ಳುತ್ತಿದ್ದಂತೆ ಹಿಂದಿನಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಮೂವರು ಕೆಳಗೆ ಬಿದ್ದಿದ್ದಾರೆ. ಬಸ್ಸಿನ ಹಿಂಬದಿಯ ಚಕ್ರ ಅಮೃತಾಳ ತಲೆ ಮೇಲೆ ಹರಿದಿತ್ತು. ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇತ್ತ ಘಟನೆಯಲ್ಲಿ ಕೃಷ್ಣಾರೆಡ್ಡಿ ಅವರ ಎಡಗಾಲು ಕೂಡ ಮುರಿದಿದ್ದು, ಅಮೃತ ಸಹೋದರಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಅಪಘಾತ ನಡೆದ ಕೂಡಲೇ ಸ್ಥಳೀಯರು ನೆರವಿಗೆ ಆಗಮಿಸಿದ್ದು, ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಬಾಲಕಿಯ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಕುರಿತು ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]