ಬೆಂಗಳೂರು: ನಗರದ ಶ್ರೀರಾಮಪುರ ಮೆಟ್ರೋ ಸ್ಟೇಷನ್ನ ಎಸ್ಕಲೇಟರ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಒಂದೂವರೆ ವರ್ಷದ ಹೆಣ್ಣು ಮಗು ಮೃತಪಟ್ಟಿದ್ದಾಳೆ.
ಹಾಸಿನಿ ಮೃತಪಟ್ಟ ಪುಟ್ಟ ಕಂದಮ್ಮ. ಭಾನುವಾರ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ಹತ್ತಲು ಬರುತ್ತಿದ್ದ ವೇಳೆ ಆಯತಪ್ಪಿ ಹಾಸಿನಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಹಾಸಿನಿಯನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಆಕೆ ಇಂದು ಮೃತಪಟ್ಟಿದ್ದಾಳೆ.
ಘಟನೆ ನಡೆದಿದ್ದು ಹೇಗೆ..?:
ಮಗು ಹಾಸಿನಿ ತನ್ನ ತಾತ- ಅಜ್ಜಿ ಜೊತೆ ಹೋಗುವಾಗ ಈ ಘಟನೆ ನಡೆದಿದೆ. ತಾತ ಬಾಲಕೃಷ್ಣ ಅವರು ಶ್ರೀರಾಮಪುರದಿಂದ ಉತ್ತರಹಳ್ಳಿಗೆ ಹೋಗುತ್ತಿದ್ದರು. ಹೀಗಾಗಿ ಎಸ್ಕಲೇಟರ್ ನಲ್ಲಿ ಹತ್ತುವಾಗ ಬಾಲಕೃಷ್ಣ ಅವರ ಒಂದು ಕಾಲು ಸ್ಕಿಡ್ ಆಗಿದೆ. ಇದರಿಂದ ಅವರು ಹಿಂದೆ ಬರುವಾಗ ಮಗು ಎಸ್ಕಲೇಟರ್ ಪಕ್ಕದಲ್ಲಿದ್ದ ಸಣ್ಣ ಗ್ಯಾಪ್ನಿಂದ ಕೆಳಗೆ ರಸ್ತೆಗೆ ಬಿದ್ದಿದೆ. ಸುಮಾರು 35 ಎತ್ತರದ ಅಡಿಯಿಂದ ಬಿದ್ದ ಹಾಸಿನಿ ಗಂಭೀರ ಗಾಯಗೊಂಡಿದ್ದಳು.
ಹಾಸಿನಿ ಮೃತಪಟ್ಟಿದ್ದರಿಂದ ಆಕೆಯ ತಾತ, ನಿರ್ಲಕ್ಷ್ಯ ಹಾಗೂ ಸರಿಯಾಗಿ ಸುರಕ್ಷತಾ ಕ್ರಮಗಳನ್ನ ಕೈಗೊಂಡಿಲ್ಲ ಎಂದು ಆರೋಪಿಸಿ ಮೆಟ್ರೋ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಬಾಲಕಿಯ ತಾತ ನೀಡಿದ್ದ ದೂರು ಆಧರಿಸಿ ಮೆಟ್ರೋ ಅಧಿಕಾರಿಗಳ ವಿರುದ್ಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv