ಚಿಕ್ಕೋಡಿ(ಬೆಳಗಾವಿ): ದೇಶದ ಏಕತೆ ಹಾಗೂ ಬದ್ಧತೆಗೆ ಧಕ್ಕೆ ತಂದರೆ ಅವರು ದೇಶ ದ್ರೋಹಿಗಳೇ. ಅವರು ಯಾವುದೇ ಸಮುದಾಯದವರು ಆಗಲಿ, ಅವರು ದೇಶ ದ್ರೋಹಿಗಳೇ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಬಾಂಬರ್ ಆದಿತ್ಯ ರಾವ್ ಬಗ್ಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿದೆ. ಆದಿತ್ಯ ರಾವ್, ಪ್ರಭಾಕರ್ ಭಟ್ ಜೊತೆಗಿನ ಫೋಟೋ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನನ್ನೊಂದಿಗೂ ಬಹಳ ಜನ ಫೋಟೋ ತೆಗೆದುಕೊಂಡಿದ್ದಾರೆ. ಅವರು ಏನಾದರೂ ಮಾಡಿದರೆ ನಾನು ಜವಾಬ್ದಾರಿ ಆಗ್ತೀನಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಪ್ರವಾಹ ಸಂತ್ರಸ್ತರ ವಿಚಾರವಾಗಿ ಮಾತನಾಡಿದ ಅವರು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವ ವಿಚಾರಕ್ಕೆ ಸರ್ಕಾರ ಬದ್ಧವಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ಆರೋಪ ಸುಳ್ಳು. ಕೇಂದ್ರಕ್ಕಿಂತ ಹೆಚ್ಚುವರಿಯಾಗಿ ಪರಿಹಾರ ಕೊಡುತ್ತಿದ್ದೇವೆ. ಎನ್.ಡಿ.ಆರ್.ಎಫ್ ಮಾನದಂಡಕ್ಕಿಂತ ಹೆಚ್ಚು ಪರಿಹಾರ ಕೊಟ್ಟಿದ್ದೇವೆ. ಕೆಲವೆಡೆ ತಾಂತ್ರಿಕ ತೊಂದರೆಯಿಂದಾಗಿ ಪರಿಹಾರ ವಿಳಂಬ ಆಗಿದೆ. ಆದರೆ ನೆರೆ ಪರಿಹಾರ ವಿಷಯದಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಇದೇ ವೇಳೆ ಪರಿಹಾರ ವಿಚಾರವಾಗಿ ಡಿಸಿಎಂ ಕಾರಿಜೋಳ ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿ ತಕ್ಷಣವೇ ಬಾಕಿ ಇರುವ ಸಂತ್ರಸ್ತರ ಪರಿಹಾರ ಬಿಡುಗಡೆ ಮಾಡುವಂತೆ ಸೂಚನೆ ನೀಡಿದರು.