ಚಿಕ್ಕಮಗಳೂರು: ಕಳೆದ ನಾಲ್ಕೈದು ತಿಂಗಳಿಂದ ದಿನದಿಂದ ದಿನಕ್ಕೆ ಒಂದೊಂದು ರೀತಿಯ ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದ ಚಿಕ್ಕಮಗಳೂರು (Chikkamagaluru) ನಗರಸಭೆಯ ಹೈಡ್ರಾಮಕ್ಕೆ ಪೂರ್ಣವಿರಾಮ ಬಿದ್ದಿದೆ. ಸಿ.ಟಿ.ರವಿ (C.T.Ravi) ಆಪ್ತನಿಂದಲೇ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
20 ವರ್ಷಗಳಿಂದ ನಗರಸಭೆಯ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಈಗ ತನ್ನದೇ ಪಕ್ಷದ ಅಧ್ಯಕ್ಷನಿಂದ ಮುಖಭಂಗವಾಗಿದೆ. ಬಿಜೆಪಿಯವರೇ ಆರಿಸಿ ಅಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಯ ಅಧ್ಯಕ್ಷನ ವಿರುದ್ಧ ಅಸಮಾಧಾನಗೊಂಡು ಅವಿಶ್ವಾಸ ಮಂಡನೆಗೆ ಮುಂದಾಗಿದ್ದ ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಶಾಕ್ ನೀಡಿದೆ. ಅವಿಶ್ವಾಸ ಮಂಡನೆಯಲ್ಲಿ ಸೋಲುವ ಮೂಲಕ ಬಿಜೆಪಿ ನಗರಸಭೆಯ ಅಧಿಕಾರ ಕಳೆದುಕೊಂಡಿದೆ. ಇದನ್ನೂ ಓದಿ: ಜಾಗತಿಕ ಮಟ್ಟದ KHIR ಸಿಟಿ ನಿರ್ಮಾಣ- 40 ಸಾವಿರ ಕೋಟಿ ರೂ. ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ
ಕಳೆದ ಮೂರ್ನಾಲ್ಕು ತಿಂಗಳಿಂದ ಬಿಜೆಪಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಅಕ್ರೋಶಗೊಂಡಿದ್ದ ನಗರಸಭೆಯ ಬಿಜೆಪಿಯ ಸದಸ್ಯರು ತಮ್ಮದೇ ಪಕ್ಷದ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದರು. ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ನಗರಸಭೆ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಲಾಗಿತ್ತು. ಅವಧಿ ಮುಗಿದರೂ ಪಕ್ಷದ ನಾಯಕರು ಸೇರಿದಂತೆ ಸಿ.ಟಿ.ರವಿ ಸೂಚನೆ ನೀಡಿದ್ದರು. ರಾಜೀನಾಮೆ ನೀಡಿ ಮತ್ತೆ ಮತ್ತೆ ವಾಪಸ್ ಪಡೆದಿದ್ದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರು. ಬಿಜೆಪಿಗೆ ಜೆಡಿಎಸ್, ಪಕ್ಷೇತರರು ಬೆಂಬಲ ನೀಡಿದ್ದರೂ ಕೂಡ ಕಾಂಗ್ರೆಸ್ ಅವಿಶ್ವಾಸ ನಿರ್ಣಯದಲ್ಲಿ ನಗರಸಭೆ ಸದಸ್ಯನಿಗೆ ಬೆಂಬಲ ನೀಡಿದ ಪರಿಣಾಮ ಬಿಜೆಪಿಗೆ ಮುಖಭಂಗವಾಗಿದೆ.
ಇದರೊಂದಿಗೆ ಎರಡು ದಶಕಗಳಿಂದ ನಗರಸಭೆಯಲ್ಲಿ ತನ್ನ ಪಾರುಪತ್ಯ ಮೆರೆದಿದ್ದ ಬಿಜೆಪಿ ನಗರಸಭೆಯಲ್ಲಿರುವ 35 ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನ ಗೆದ್ದಿತ್ತು. ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಉಳಿದಂತೆ ಕಾಂಗ್ರೆಸ್ 12, ಜೆಡಿಎಸ್ 3, ಎಸ್ಡಿಪಿಐ 1, ಪಕ್ಷೇತರರು 1 ಸದಸ್ಯರು ಗೆದ್ದಿದ್ದರು. ಆದರೆ, ಈಗ ಬಿಜೆಪಿಯ ಅಧ್ಯಕ್ಷ ಸ್ಥಾನದ ಕುರ್ಚಿ ಕಿತ್ತಾಟದಿಂದ ನಗರಸಭೆ ಅಧಿಕಾರವನ್ನ ಕಳೆದುಕೊಂಡಿದೆ. ಶುಕ್ರವಾರ ನಿರ್ಧಾರವಾಗಿದ್ದ ನಗರಸಭೆ ಅಧ್ಯಕ್ಷನ ವಿರುದ್ಧದ ಅವಿಶ್ವಾಸ ಸಭೆಯಲ್ಲಿ ಬಿಜೆಪಿ ಸದಸ್ಯರು ಬಿಜೆಪಿ ಅಧ್ಯಕ್ಷನ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಲೋಕಸಭೆ ಚುನಾವಣೆ ಆದ್ಮೇಲೆ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತೆ – ಆರ್. ಅಶೋಕ್
ನಗರದಲ್ಲಿ ಇದ್ದರೂ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಎಂಎಲ್ಸಿ ಪ್ರಾಣೇಶ್ ನಗರಸಭೆಯ ಅವಿಶ್ವಾಸ ಸಭೆಗೆ ಗೈರಾಗಿದ್ದರು. ಇದು ಕೂಡ ವರಸಿದ್ಧಿ ವೇಣುಗೋಪಾಲ್ಗೆ ವರವಾಗಿ ಪರಿಣಮಿಸಿತ್ತು. ಇನ್ನು ಚಿಕ್ಕಮಗಳೂರು ಶಾಸಕ ತಮ್ಮಯ್ಯ ಸಭೆಯಲ್ಲಿ ಭಾಗಿಯಾಗಿ ವರಸಿದ್ಧಿ ವೇಣುಗೋಪಾಲ್ ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ ತಟಸ್ಥವಾಗುವ ಮೂಲಕ ಬೆಂಬಲ ಸೂಚಿಸಿದ್ದರು. ಬಿಜೆಪಿ ನಗರಸಭೆ ಸದಸ್ಯರು ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಮಂಡನೆ ಮಾಡುವಲ್ಲಿ ವಿಫಲವಾಗುವ ಮೂಲಕ ಅಧಿಕಾರ ಕಳೆದುಕೊಂಡಿದೆ. ದಶಕಗಳಿಂದ ಕಾಫಿನಾಡ ನಗರಸಭೆ ಮೇಲೆ ಹಿಡಿತ ಸಾಧಿಸಿದ್ದ ಬಿಜೆಪಿಗೆ ತಮ್ಮ ಪಕ್ಷದ ಅಧ್ಯಕ್ಷನಿಂದಲೇ ಮುಖಭಂಗವಾಗಿದ್ದು, ತೀವ್ರ ಹಿನ್ನೆಡೆಯಾಗಿದೆ. ಬಿಜೆಪಿಯೊಳಗಿನ ನಗರಸಭೆ ಅಧ್ಯಕ್ಷರ ಕುರ್ಚಿಗಾಗಿ ಕಿತ್ತಾಟದಿಂದ ಅಧಿಕಾರ ಕಳೆದುಕೊಂಡಿದ್ದು ಕಾಂಗ್ರೆಸ್ ನಗರಸಭೆಯನ್ನ ಬಿಜೆಪಿ ಅಧ್ಯಕ್ಷನ ಮೂಲಕವೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಬುದ್ಧಿವಂತಿಕೆಯ ಹೆಜ್ಜೆ ಇಟ್ಟಿದೆ.