ಚಿಕ್ಕಮಗಳೂರು: ಊಟ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರ ಬೆನ್ನಿಗೆ ಸಿಡಿಲು ಬಡಿದರೂ ಬದುಕುಳಿದು, ಸಾವು ಗೆದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಯಡಿಯೂರು ಗ್ರಾಮದಲ್ಲಿ ನಡೆದಿದೆ.
ಯಡಿಯೂರು ಗ್ರಾಮದ ಮಂಜುನಾಥ್ ಸಾವನ್ನೇ ಗೆದ್ದವರು. ಕಳಸ ಸುತ್ತಮುತ್ತ ಶುಕ್ರವಾರ ಸಂಜೆ ಭಾರೀ ಮಳೆಯಾಗಿತ್ತು. ಈ ವೇಳೆ ಕೆಲಸಕ್ಕೆ ಹೋಗಿದ್ದ ಮಂಜುನಾಥ್ ಮನೆಗೆ ಬಂದು ಊಟ ಮಾಡುತ್ತಿದ್ದರು. ಮನೆಗೆ ಬಡಿದ ಸಿಡಿಲು ಊಟ ಮಾಡುತ್ತಿದ್ದ ಮಂಜುನಾಥ್ ಅವರ ಬೆನ್ನಿಗೆ ಅಪ್ಪಳಿಸಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗಿದ್ದು, ಮಂಜುನಾಥ್ ಚೇತರಿಸಿಕೊಂಡಿದ್ದಾರೆ. ಮನುಷ್ಯರಿಗೆ ಸಿಡಿಲು ಬಡಿದರೆ ಬದುಕುವುದು ತೀರಾ ವಿರಳ. ಮಂಜುನಾಥ್ ಸಿಡಿಲಿಗೆ ಸಿಕ್ಕು ಬದುಕುಳಿದು, ಸಾವನ್ನೇ ಗೆದ್ದಿದ್ದಾರೆ.
ಅನ್ನ ತಿನ್ನುವಾಗ ಯಮ ಕೂಡ ಸಾವು ಕೊಡದೇ ಕಾಯುತ್ತಾನೆ. ನಾನು ಕೂಡ ಅಂತಹ ಅದೃಷ್ಟದಿಂದ ಬದುಕುಳಿದಿದ್ದೇನೆ ಎಂದು ಮಂಜುನಾಥ್ ಹೇಳಿದ್ದಾರೆ.