ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿ (Mailaralingeshwara swamy)ಯು ಕಾರ್ಣಿಕದ ಭವಿಷ್ಯ ನುಡಿ ನುಡಿದಿದ್ದು, ಭಕ್ತರು ಉಘೇ ಮೈಲಾರಲಿಂಗ ಎಂದು ಕೈಮುಗಿದಿದ್ದಾರೆ.
ವಿಜಯದಶಮಿಯ (Vijayadashami) ಮರು ದಿವನ ದೇವಸ್ಥಾನದ ಮುಂಭಾಗದ ಬಿಲ್ಲನ್ನೇರಿ ಬೆಳಗ್ಗಿನ ಜಾವ ಭವಿಷ್ಯವಾಣಿ ನುಡಿದ ಮೈಲಾರಲಿಂಗ ಸ್ವಾಮಿ, ರೈತ ಸಮುದಾಯಕ್ಕೆ ಸಂತಸದ ನುಡಿ ನುಡಿದಿದೆ. ಭೂಮಿಗೆ ವರುಣನ ಸಿಂಚನವಾಯಿತಿ ಅಂದರೆ, ರಾಜ್ಯದಲ್ಲಿ ಮತ್ತೆ ಮಳೆ (Rain) ಬೀಳಲಿದೆ.
ಈ ಹಿಂದೆ ಸುರಿದ ಮಳೆ ರೈತ ಸಮುದಾಯಕ್ಕೆ ಹೆಚ್ಚು ನೋವು-ನಷ್ಟವನ್ನ ತಂದಿತ್ತು. ಆದರೆ ಈಗ ಬರುವ ಮಳೆ ರೈತರಿಗೆ ಅನುಕೂಲವಾಗಲಿದೆ ಎಂದಿದೆ. ಇನ್ನು ಕುರು ಪಾಂಡವರು ಕಾದಾಡಿದರು. ಅಂದರೆ, ರಾಜ್ಯದಲ್ಲಿ ಚುನಾವಣೆ (Election) ಸಮೀಪಿಸುತ್ತಿದೆ. ಅಧಿಕಾರಕ್ಕಾಗಿ ಎಲ್ಲಾ ರಾಜಕೀಯ ಪಕ್ಷದವರು ಒಬ್ಬರ ಮೇಲೋಬ್ಬರು ಆರೋಪಗೈಯುತ್ತಾ ಅಧಿಕಾರಕ್ಕಾಗಿ ಕಾದಾಡುವರು ಎಂದು ಹೇಳಿದೆ.
ಧರ್ಮದ ಜ್ಯೋತಿ ಬೆಳಗಿದರು ಅಂದರೆ, ಜನರಿಗೆ ಧಾರ್ಮಿಕ ನಂಬಿಕೆ ಹೆಚ್ಚಾಗಿ, ಜನ ಧರ್ಮದ ಆಧಾರದ ಮೇಲೆ ಚುನಾವಣೆಗೆ ಮತ ನೀಡುವ ಸಾಧ್ಯತೆ ಇದೆ ಎಂದು ಕಾರ್ಣಿಕದ ಭವಿಷ್ಯವಾಣಿಯನ್ನ ಗ್ರಾಮದ ಹಿರಿಯರು ವಿಶ್ಲೇಷಿಸಿದ್ದಾರೆ. ಮೈಲಾರಲಿಂಗನ ಭವಿಷ್ಯವಾಣಿ ಎಂದಿಗೂ ಸುಳ್ಳಾಗುವುದಿಲ್ಲ ಅನ್ನೋದ ಭಕ್ತರ ನಂಬಿಕೆ. ಇದನ್ನೂ ಓದಿ: ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ
ಈ ಹಿಂದೆ ಹೇಳಿದ ಎಲ್ಲಾ ಕಾರ್ಣೀಕದ ನುಡಿಗಳು ಅದೇ ರೀತಿ ನಡೆದಿದೆ. ಹಾಗಾಗಿ ಭಕ್ತರಿಗೆ ಮೈಲಾರಲಿಂಗನ ಕಾರ್ಣಿಕದ ಮೇಲೆ ನಂಬಿಕೆ ಹೆಚ್ಚು. ಅದರಲ್ಲೂ ರೈತರಿಗೆ ಮಳೆಯಿಂದ ಅನುಕೂಲವಿದೆ ಎಂದು ಮೈಲಾರಲಿಂಗ ಭವಿಷ್ಯವಾಣಿ ನುಡಿದಿರೋದು ರೈತ ಸಮುದಾಯಕ್ಕೆ ಸಂತಸ ತಂದಿದೆ.