ಚಿಕ್ಕಮಗಳೂರು: ಮಲೆನಾಡು ಏನಾಗುತ್ತೋ, ನಮಗೆ ಭವಿಷ್ಯ ಇದ್ಯೋ-ಇಲ್ವೋ ಎಂಬ ಆತಂಕ ಮಲೆನಾಡಿಗರಲ್ಲಿ ದಟ್ಟವಾಗಿದೆ. ಯಾಕಂದ್ರೆ, ಎರಡು ತಿಂಗಳ ಕಾಲ ನಿರಂತರವಾಗಿ ಸುರಿದ ಮಳೆಯ ಅನಾಹುತದಿಂದ ಜನಸಾಮಾನ್ಯರು ಹೊರಬರುವ ಮುನ್ನವೇ ಮಲೆನಾಡಿನ ಬೆಟ್ಟ-ಗುಡ್ಡ, ಭೂಕುಸಿತ ಜನಸಾಮಾನ್ಯರನ್ನ ಚಿಂತೆಗೀಡು ಮಾಡಿದೆ.
ಮಲೆನಾಡಿನಾದ್ಯಂತ ಎಕರೆಗಟ್ಟಲೇ ಕಾಫಿ-ಅಡಿಕೆ ತೋಟ, ಸೇತುವೆಗಳು, ರಸ್ತೆಗಳು ಕುಸಿಯುತ್ತಿರೋದ್ರಿಂದ ಮಲೆನಾಡಿಗರು ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಎರಡ್ಮೂರು ದಶಕಗಳ ಬಳಿಕ ಸುರಿದ ಮಹಾಮಳೆಯಿಂದ ಮಲೆನಾಡು ಅಕ್ಷರಶಃ ಜಲಾವೃತಗೊಂಡಿತ್ತು. ಮಳೆ ನಿಂತ ಬಳಿಕ ಶುರುವಾಗಿರೋ ಗಾಳಿಯ ವೇಗಕ್ಕೆ ಮಲೆನಾಡಿಗರು ಮತ್ತಷ್ಟು ಕಂಗಾಲಾಗಿದ್ದಾರೆ. ಮಲೆನಾಡಿನ ಬಹುತೇಕ ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗ್ತಿದ್ದು ಜನರಿಗೆ ಒಂದೆಡೆ ಆತಂಕ, ಮತ್ತೊಂದೆಡೆ ಜೀವ-ಜೀವನದ ಬಗ್ಗೆ ಗೊಂದಲ ಉಂಟಾಗಿದೆ. ಇದನ್ನೂ ಓದಿ: ಚಿಕ್ಕಮಗ್ಳೂರಿನಲ್ಲಿ ಮುಂದುವರಿದ ಭೂಕುಸಿತ- 4 ಗ್ರಾಮಗಳ ಸಂಪರ್ಕ ಕಡಿತ
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ದೋಬ್ಲಾ ಗ್ರಾಮದಲ್ಲಿ ರಸ್ತೆಯೊಂದು ಸುಮಾರು 50 ಅಡಿ ಆಳಕ್ಕೆ ಕುಸಿದು ಬಿದ್ದಿದೆ. ಪರಿಣಾಮ ರಸ್ತೆಗೆ ನಿರ್ಮಾಣ ಮಾಡಿದ ತಡೆಗೋಡೆ ಕೂಡ ನೆಲಸಮವಾಗಿದೆ. ರಸ್ತೆ ಕೆಳಗೆ ಆಳವಾದ ಪ್ರದೇಶವಿದ್ದುದರಿಂದ ಯಾವುದೇ ಅನಾಹುತಗಳು ಸಂಭವಿಸಬಾರದೆಂಬ ನಿಟ್ಟಿನಲ್ಲಿ ಕಾಂಕ್ರೀಟ್ ನಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಆದ್ರೆ ಇದೀಗ ತಡೆಗೋಡೆ ಕೂಡ ಮಣ್ಣುಪಾಲಾಗಿದೆ. ಇದನ್ನು 4, 5ತಿಂಳ ಹಿಂದೆ ನಿರ್ಮಾಣ ಮಾಡಲಾಗಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv