ಚಿಕ್ಕಮಗಳೂರು: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸುತ್ತಿರುವ ಅಮೃತ್ ಶೆಣೈ ಅವರ ಎಐಸಿಸಿ ಸದಸ್ಯತ್ವವನ್ನು ಕೆಪಿಸಿಸಿ ಅಮಾನತು ಮಾಡಿದೆ.
ಕ್ಷೇತ್ರದಲ್ಲಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಎರವಲು ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಮೃತ್ ಶೆಣೈ ಬಂಡಾಯ ಹೂಡಿ ಪಕ್ಷೇತರರಾಗಿ ಸ್ಪರ್ಧೆಗೆ ನಿರ್ಧರಿಸಿದ್ದರು. ಪರಿಣಾಮ ಎಐಸಿಸಿ ಸದಸ್ಯರಾಗಿದ್ದ ಅಮೃತ್ ಶೆಣೈ ಅವರನ್ನು ಸದ್ಯ 6 ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಿ ಆದೇಶಿಸಲಾಗಿದೆ.
ಕ್ಷೇತ್ರದಲ್ಲಿ ಅಸ್ತಿತ್ವವೇ ಇಲ್ಲದ ಜೆಡಿಎಸ್ ಪಕ್ಷಕ್ಕೆ ಟಿಕೆಟ್ ನೀಡಿರೋದರಿಂದ ಕಾಂಗ್ರೆಸ್ ಕಾರ್ಯಕರ್ತರು ಬೇಸರಗೊಂಡಿದ್ದರು. ಪರಿಣಾಮ ಕಾರ್ಯಕರ್ತರ ಬೆಂಬಲ ಕೋರಿದ್ದ ಉದ್ಯಮಿ ಅಮೃತ್ ಶೆಣೈ ಬಂಡಾಯವಾಗಿ ಪಕ್ಷೇತರರಾಗಿ ಸ್ಪರ್ಧೆ ನಡೆಸುವುದಾಗಿ ಈ ಹಿಂದೆ ತಿಳಿಸಿದ್ದರು. ಮೈತ್ರಿ ಬೆಂಬಲಿತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ನಡೆಸಿದ ಕಾರಣ ಶಿಸ್ತು ಕ್ರಮದ ಹೆಸರಿನಲ್ಲಿ ಕಾಂಗ್ರೆಸ್ ಕ್ರಮಕೈಗೊಂಡಿದೆ. ಶೆಣೈ ಕಣಕ್ಕಿಳಿದಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರ ಮತಗಳು ವಿಭಜನೆಯಾಗುವುದು ಖಚಿತವಾಗಿದ್ದು, ಇದು ಮೈತ್ರಿ ಬೆಂಬಲಿತ ಅಭ್ಯರ್ಥಿಯ ಮೇಲೆ ಪ್ರಭಾವ ಬೀರಲಿದೆ.
ಇತ್ತ ಬೀದರ್ ಲೋಕಸಭಾ ಕ್ಷೇತ್ರದಿಂದ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಶಾನುಲ್ ಹಖ್ ಬುಖಾತಿ ಅವರನ್ನು ಕೂಡ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಅಮಾನತು ಮಾಡಲಾಗಿದೆ.