ಚಿಕ್ಕಬಳ್ಳಾಪುರ: ತನ್ನ ಹೆಂಡತಿ ಜೊತೆ ಅಸಭ್ಯವಾಗಿ ಮಾತನಾಡಿದ ಅಂತ ಕುಡಗೋಲಿನಿಂದ ಕೊಚ್ಚಿ ರೌಡಿಶೀಟರ್ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೋಟಾಲದಿನ್ನೆ ಗ್ರಾಮದ ಬಳಿ ತಡರಾತ್ರಿ ನಡೆದಿದೆ.
ಉಪ್ಪಾರಹಳ್ಳಿ ಗ್ರಾಮದ ರೌಡಿಶೀಟರ್ ರಮೇಶ್ ಹಲ್ಲೆಗೊಳಗಾದ ವ್ಯಕ್ತಿ. ಮುದುಗೆರೆ ಗ್ರಾಮದ ವಿಶ್ವ ರಮೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ತಡರಾತ್ರಿ ಕೋಟಾಲದಿನ್ನೆ ಬಾರ್ ಬಳಿ ಗುಂಪುಕಟ್ಟಿಕೊಂಡು ಮದ್ಯಪಾನ ಮಾಡುತ್ತಿದ್ದ ರೌಡಿಶೀಟರ್ ರಮೇಶ್ ಹಾಗೂ ಆತನ ತಂಡ ಚಿಕನ್ ಖರೀದಿಗೆ ಅಂತ ಬಂದಿದ್ದ ವಿಶ್ವನನ್ನ ಕರೆದಿದ್ದಾರೆ. ಈ ವೇಳೆ ಅವರ ಬಳಿಗೆ ಬರಲು ವಿಶ್ವ ನಿರಾಕರಿಸಿದಾಗ ರಮೇಶ್ ಆತನ ಬಳಿ ಬಂದು ಮೊಬೈಲ್ ಕಸಿದುಕೊಂಡು ಹಣ ಕೊಡುವಂತೆ ಪೀಡಿಸಿದ್ದಾನೆ. ಹಣ ಇಲ್ಲ ಮೊಬೈಲ್ ಹೋದರೆ ಹೋಗಲಿ ಜಗಳ ಯಾಕೆ ಅಂತ ವಿಶ್ವ ಸುಮ್ಮನೆ ಮನೆಗೆ ಹೋಗಿದ್ದಾನೆ.
ರಾತ್ರಿಯಾದರೂ ವಿಶ್ವ ಮನೆಗೆ ಬಾರದೇ ಇರುವುದನ್ನು ನೋಡಿ ಆತನ ಪತ್ನಿ ಪತಿ ಮೊಬೈಲ್ಗೆ ಕಾಲ್ ಮಾಡಿದ್ದಾಳೆ. ಆದರೆ ಮೊಬೈಲ್ ರಮೇಶ್ನ ಬಳಿ ಇದ್ದ ಕಾರಣ ಆತನೇ ಕಾಲ್ ರಿಸೀವ್ ಮಾಡಿದ್ದು, ವಿಶ್ವನ ಪತ್ನಿ ಜೊತೆ ಅಸಭ್ಯವಾಗಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಮನೆಗೆ ಹೋದ ವಿಶ್ವನ ಬಳಿ ರಮೇಶ್ ಮಾತನಾಡಿದ್ದನ್ನು ಪತ್ನಿ ಹೇಳಿದ್ದಾಳೆ. ಇದರಿಂದ ರೊಚ್ಚಿಗೆದ್ದ ವಿಶ್ವ ಮನೆಯಲ್ಲಿದ್ದ ಕುಡುಗೋಲು ತೆಗೆದುಕೊಂಡು ರಮೇಶ್ನ ಬಳಿ ಹೋಗುತ್ತಿದ್ದ. ಮಾರ್ಗ ಮಧ್ಯದಲ್ಲಿ ರಮೇಶ್ ಅಡ್ಡಬಂದ ಪರಿಣಾಮ ಆತನ ತಲೆಗೆ ಕುಡುಗೋಲಿನಿಂದ ಹೊಡೆದಿದ್ದಾನೆ. ಪರಿಣಾಮ ರೌಡಿಶೀಟರ್ ರಮೇಶ್ ತಲೆಯ ಕೆಳಭಾಗ ಹಾಗೂ ಕತ್ತಿಗೆ ಗಂಭೀರವಾದ ಗಾಯವಾಗಿದೆ.
ಸದ್ಯ ಗಾಯಾಳು ರಮೇಶ್ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾನೆ. ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದಾರೆ. ಇತ್ತ ಘಟನೆ ನಂತರ ಪರಾರಿಯಾಗಿದ್ದ ವಿಶ್ವನನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದು, ವಿಶ್ವನಿಗೆ ಸಾಥ್ ನೀಡಿ ಬೈಕ್ ಚಲಾಯಿಸಿದ ಆನಂದ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ರೌಡಿಶೀಟರ್ ರಮೇಶ್ ಕಳೆದ ವಿಧಾನಸಭಾ ಚುನಾವಣೆ ವೇಳೆ ಕೋಟಾಲದಿನ್ನೆ ಬಾರ್ ಬಳಿ ನಡೆದಿದ್ದ ಜೆಡಿಎಸ್ ಕಾರ್ಯಕರ್ತ ರಾಮರೆಡ್ಡಿ ಕೊಲೆ ಪ್ರಕರಣದ ಎ1 ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಒಂದು ವರ್ಷ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರಬಂದಿದ್ದನು. ಹೊರ ಬಂದ ಮೇಲೆ ಹಲವರ ಬಳಿ ಇದೇ ರೀತಿ ದುಡ್ಡಿಗಾಗಿ ಪಿಡಿಸಿಕೊಂಡು, ಕಿರಿಕ್ ಮಾಡಿಕೊಂಡು ಜಗಳ ಮಾಡಿಕೊಂಡು ಓಡಾಡುತ್ತಿದ್ದನು ಎಂದು ಗ್ರಾಮಸ್ಥರು ತಿಳಿಸಿದರು.