ಚಿಕ್ಕಬಳ್ಳಾಪುರ: ನನ್ನ ಮಗ ಮನೆಗೆ ಬರುತ್ತಿಲ್ಲ, ನಾನು ಅವನ ಪರ ಪ್ರಚಾರ ಮಾಡಲ್ಲ ಎಂದು ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಹೇಳಿದ್ದಾರೆ.
ಇಂದು ನಗರದಲ್ಲಿ ಹೊಸಕೋಟೆ ಕ್ಷೇತ್ರದಿಂದ ಶರತ್ ಬಚ್ಚೇಗೌಡ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಮಗ ಶರತ್ ಬಚ್ಚೇಗೌಡ ಪರ ಪ್ರಚಾರ ಮಾಡಲ್ಲ. ನಾನು ಬಿಜೆಪಿ ಯಲ್ಲಿರೋ ಬಚ್ಚೇಗೌಡ. ಹೇಗೆ ಪ್ರಚಾರ ಮಾಡಲಿ ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಮಗ ಮನೆಗೆ ಬರುತ್ತಿಲ್ಲ. ನನ್ನ ಮಗ ಬೇರೆ ಕಡೆ ಇದ್ದಾನೆ. ನಾನು ಭಾರತೀಯ ಜನತಾ ಪಕ್ಷದ ಸಂಸದಾನಾಗಿದ್ದೇನೆ. ನನ್ನ ಮಗನ ತೀರ್ಮಾನ ಅವನಿಗೆ ಬಿಟ್ಟಂತಹ ವಿಚಾರ. ನನ್ನ ಮಗ ವಿದ್ಯಾವಂತ, ಬುದ್ಧಿವಂತ ಅವನ ತೀರ್ಮಾನ ಅವನಿಗೆ ಬಿಟ್ಟಂತಹದ್ದು. ಮಗನ ಸ್ಪರ್ಧೆ ವಿಚಾರದಲ್ಲಿ ನಾನು ಮಧ್ಯ ಪ್ರವೇಶ ಮಾಡಲ್ಲ ಎಂದು ತಿಳಿಸಿದರು.
ಇದೇ ವೇಳೆ ಮೆಡಿಕಲ್ ಕಾಲೇಜು ವಿಚಾರದಲ್ಲಿ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ಮಾಜಿ ಸಚಿವ ಡಿಕೆ ಶಿವಕುಮಾರ್ ಗೊಂದಲ ಮೂಡಿಸೋ ಅವಶ್ಯಕತೆ ಇಲ್ಲ. ಸರ್ಕಾರ ಈಗಾಗಲೇ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಕೊಡಲು ತೀರ್ಮಾನಿಸಿದೆ. ಜಾಗ ಗುರುತಿಸಿ 150 ಕೋಟಿ ಅನುದಾನ ಸಹ ಬಿಡುಗಡೆ ಆಗಿದೆ. ಕನಕಪುರಕ್ಕೆ ಬೇಕಾದರೆ ಮತ್ತೊಂದು ಮೆಡಿಕಲ್ ಕಾಲೇಜು ತಗೊಳ್ಳಿ. ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಆಗಿರೋದನ್ನು ನಾನು ಒಪ್ಪಲ್ಲ. ಅವರ ಕಾಲೇಜು ಅವರು ಮಾಡಿಕೊಳ್ಳಲಿ ಎಂದು ಹೇಳಿದರು.
ಮಂಚೇನಹಳ್ಳಿ ತಾಲೂಕು ಆಗಿರೋದು ಒಳ್ಳೆಯ ಕಾರ್ಯ. ಮೆಡಿಕಲ್ ಕಾಲೇಜು ಆಸ್ಪತ್ರೆ ಆಗ್ತಿರೋದು ಒಳ್ಳೆಯ ಕೆಲಸ. ಕಾಲೇಜನ್ನ ಯಡಿಯೂರಪ್ಪ ನವರು ಬಂದು ಉದ್ಘಾಟನೆ ಮಾಡಲಿದ್ದಾರೆ. ನವೆಂಬರ್ 8 ರಂದು ಕಾರ್ಯಕ್ರಮ ನಿಗದಿಯಾಗಿದೆ ಎಂದರು ಇದೇ ವೇಳೆ ಪಠ್ಯದಿಂದ ಟಿಪ್ಪು ವಿಷಯ ಕೈ ಬಿಡುವ ವಿಚಾರವಾಗಿ ಸರ್ಕಾರದ ಈ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿದರು.