ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಅಗ್ರಹಾರದಲ್ಲಿ ನಿವೃತ್ತ ಕೆಇಬಿ ಅಧಿಕಾರಿ ಜಾಫರ್ ಖಾನ್ ಹಾಗೂ ಅವರ ಮಗ ಮೌಲಾ ಇಂದು ಜನರಿಗೆ ಉಚಿತವಾಗಿ ಹಣ ಹಂಚಿದ್ದಾರೆ.
ತಮ್ಮ ಏರಿಯಾದಲ್ಲಿನ ಬಡವರಿಗೆ ತಲಾ 100-200 ರೂಪಾಯಿ ವಿತರಿಸಿದ್ದಾರೆ. ದುಡ್ಡು ಕೊಡುತ್ತಿದ್ದಾರೆ ಎಂದು ತಿಳಿದ ಜನ ತಂಡೋಪತಂಡವಾಗಿ ಜಮಾಯಿಸಿ ಹಣ ಪಡೆದುಕೊಂಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಮರೆತು ನಾ ಮುಂದು ತಾ ಮುಂದು ಅಂತ ಹಣ ಪಡೆದುಕೊಳ್ಳೋಕೆ ಮುಗಿಬಿದ್ದಿದ್ದಾರೆ.
ರಂಜಾನ್ ಹಬ್ಬದ ಅಂಗವಾಗಿ ಪ್ರತಿ ವರ್ಷ ಇದೇ ರೀತಿ ಜಾಫರ್ ಖಾನ್ ಹಣ ಹಂಚಿಕೆ ಮಾಡುತ್ತಿದ್ದರಂತೆ. ಈ ಬಾರಿ ಕೊರೊನಾ ಎಫೆಕ್ಟ್ ಹಿನ್ನೆಲೆ ಮೊದಲೇ ಹಣ ಹಂಚಿಕೆ ಮಾಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಇಲ್ಲದೆ ಜನ ಮುಗಿಬಿದ್ದಿರುವ ಮಾಹಿತಿ ಅರಿತ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಜನರನ್ನು ಚದುರಿಸಿದ್ದಾರೆ. ತದನಂತರ ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡವರಿಗೆ ಹಣ ಹಂಚಿಕೆ ಮಾಡಿಸಿದ್ದಾರೆ. ಸರಿ ಸುಮಾರು 40000 ಹಣ ಹಂಚಿಕೆ ಮಾಡಿರುವುದಾಗಿ ಜಾಫರ್ ಖಾನ್ ಹೇಳಿದ್ದಾರೆ.