ಚಿಕ್ಕಬಳ್ಳಾಪುರ: ಜಿಲ್ಲೆಯ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಸಿ. ಎಸ್ ದ್ವಾರಕನಾಥ್ ಅವರು ಯೋಧನ ಪತ್ನಿಗೆ ಬಾಗಿನ ನೀಡಿ ಬಳಿಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಇಂದು ಚಿಕ್ಕಬಳ್ಳಾಪುರ ನಗರದ KSRTC ಡಿಪೋ ಗ್ಯಾರೇಜ್ ಬಳಿಯ ಇರುವ ಯೋಧ ನಾಗಾರ್ಜುನ ಮನೆಗೆ ಸಿಎಸ್ ದ್ವಾರಕನಾಥ್ ಭೇಟಿ ನೀಡಿದ್ದಾರೆ. ಬಳಿಕ ಯೋಧ ನಾಗಾರ್ಜುನ ಪತ್ನಿ ಮೀನಾಕ್ಷಿ ಜೊತೆ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ಸಂದರ್ಭದಲ್ಲಿ ಮೀನಾಕ್ಷಿಗೆ ದ್ವಾರಕನಾಥ್ ದಂಪತಿ ಬಾಗಿನ ಕೊಟ್ಟಿದ್ದಾರೆ. ಹರಿಶಿನ ಕುಂಕುಮ ಸೀರೆ ಹಣ್ಣು ಕಾಯಿ ಕೊಟ್ಟು ಬಳಿಕ ನಾಮಪತ್ರ ಸಲ್ಲಿಕೆಗೆ ತೆರಳಿದ್ದಾರೆ. ಯೋಧ ನಾಗಾರ್ಜುನ್ ಅವರು ಅಂಡಮಾನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಗಿನ ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ದೇಶಕ್ಕೋಸ್ಕರ ಚಳಿ, ಗಾಳಿ, ಮಳೆ, ಬಿಸಿಲು ಹಾಗೂ ಹಿಮದಲ್ಲಿ ಕೆಲಸ ಮಾಡುವಂತಹ ಯೋಧರ ಕುಟುಂಬಗಳನ್ನು ಇಲ್ಲಿನ ರಾಜಕರಾಣ ನಿರ್ಲಕ್ಷ್ಯಿಸುತ್ತಿದೆ. ಆ ಕಾರಣಕ್ಕಾಗಿ ಇಡೀ ಯೋಧರ ಕುಟುಂಬಗಳ ಸಮಸ್ಯೆಗಳನ್ನು ಕುರಿತು ಸದನದಲ್ಲಿ ಪ್ರಾತಿನಿಧ್ಯ ವಹಿಸಬೇಕು ಎಂದು ಬಯಸುತ್ತಾ ಇದ್ದೀನಿ ಅಂದ್ರು.
ನನ್ನ ಮುಂದೆ 2 ಆಯ್ಕೆಗಳು ಇವೆ. ಅದರಲ್ಲಿ ಒಂದು ದೇಶದ ಆಯ್ಕೆ, ಎರಡನೆಯದ್ದು, ನನ್ನ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಆದ್ಯತೆ ನೀಡುವುದಾಗಿದೆ. ದೇಶದ ಆಯ್ಕೆ ಏನೆಂದರೆ, ಸಾಮಾನ್ಯ ಯೋಧರ ಕುಟುಂಬ, ಆರೋಗ್ಯದ ಬಗ್ಗೆ ಯಾರು ಸದನದಲ್ಲಿ ಮಾತನಾಡಲ್ಲ. ಹೀಗಾಗಿ ನಾನು ಅವರ ಪರ ಧ್ವನಿಯೆತ್ತ ಬೇಕು ಅಂದುಕೊಂಡಿದ್ದೇನೆ ಎಂದರು.
ಇತ್ತ ಭೋಗನಂಧೀಶ್ವರ ದೇವಾಲಯದಲ್ಲಿ ಸಂಸದ ವೀರಪ್ಪ ಮೋಯ್ಲಿ ಅವರು ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿರುವ ದೇವಾಲಯದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಚಿವ ಎಂಟಿಬಿ ನಾಗರಾಜ್, ಶಿವಶಂಕರರೆಡ್ಡಿ, ಶಾಸಕ ಸುಧಾಕರ್ ಸೇರಿದಂತೆ ಹಲವು ಮುಖಂಡರು ಮೊಯ್ಲಿಗೆ ಸಾಥ್ ನೀಡಿದ್ದಾರೆ. ದೇವಸ್ಥಾನ ನಂತರ ಅದರ ಹಿಂಭಾಗದಲ್ಲೇ ಇರುವ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದಲ್ಲಿರುವ ದರ್ಗಾಗೆ ಮೊಯ್ಲಿ ಭೇಟಿ ನೀಡಿದ್ದಾರೆ.