ಚಿಕ್ಕಬಳ್ಳಾಪುರ: ಟಿಪ್ಪು ಸುಲ್ತಾನ ಓರ್ವ ಮತಾಂಧ ಹಾಗೂ ಅಮಾಯಕರನ್ನು ಕೊಂದ ಕ್ರೂರಿ ಹೀಗಾಗಿ ಟಿಪ್ಪು ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಟಿಪ್ಪು ಜಯಂತಿ ಆಚರಣೆ ಮಾಡಬಾರದು ಅನ್ನೋದು ಬಿಜೆಪಿ ನಿಲುವು ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ನಂತರ ಮಾತನಾಡಿದ ಡಿಸಿಎಂ, 200 ವರ್ಷಗಳ ಹಿಂದೆ ನರಕಚರ್ತುದಶಿಯಂದು ಮೇಲುಕೋಟೆಯಲ್ಲಿ 800 ಕ್ಕೂ ಹೆಚ್ಚು ಮಂದಿ ಅಮಾಯಕರನ್ನು ಟಿಪ್ಪು ಸುಲ್ತಾನ್ ಕೊಂದು ನರಹೋಮ ಮಾಡಿದ್ದ. ಇಂತಹ ಮತಾಂಧ ಹಾಗೂ ಅಮಾಯಕರನ್ನು ಕೊಂದ ಟಿಪ್ಪು ಸುಲ್ತಾನನ ಜಯಂತಿ ಆಚರಣೆ ಮಾಡಬಾರದು ಅನ್ನೋದು ನಮ್ಮ ನಿಲುವು ಎಂದರು.
ಇಂದಿಗೂ ಮೇಲುಕೋಟೆಯ ಜನರ ಮೇಲೆ ಟಿಪ್ಪು ಸುಲ್ತಾನ್ ನಡೆಸಿದ ಕ್ರೌರ್ಯದ ಗಾಯ ಮಾಸಿಲ್ಲ. ಅಲ್ಲಿನ ಜನ ಇಂದು ಸಹ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿಲ್ಲ. ಇಡೀ ದೇಶವೇ ದೀಪಾವಳಿ ಹಬ್ಬ ಆಚರಣೆ ಮಾಡಿದ್ರೇ ಮೇಲುಕೋಟೆ ಕತ್ತಲಲ್ಲಿರುತ್ತೆ. ಹೀಗಾಗಿ ಮೇಲುಕೋಟೆ ಜನರಿಗೆ ಸಮಾಧಾನ ಹಾಗೂ ಅವರಿಗಾದ ಅನ್ಯಾಯವನ್ನು ಎತ್ತಹಿಡಿಯಬೇಕಿದೆ ಎಂದು ತಿಳಿಸಿದರು.
ನಾನು ಎಲ್ಲಿ ಹೋದರೂ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತೇನೆ ಅದೇ ರೀತಿ ಇಲ್ಲಿಯೂ ಸಭೆ ನಡೆಸಿದ್ದೇನೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಪ್ರಕ್ರಿಯೆಗಳೂ ನಡೆದಿಲ್ಲ. ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಅಥವಾ ಯಾರಿಗೆ ಟಿಕೆಟ್ ನೀಡಬೇಕು ಅನ್ನೋದನ್ನು ಪಕ್ಷ ಹಾಗೂ ರಾಜ್ಯಾಧ್ಯಕ್ಷರು ತೀರ್ಮಾನ ಮಾಡ್ತಾರೆ ಎಂದರು.