ಅನುಷ್ಕಾ ಶೆಟ್ಟಿ (Anushka Shetty) ಕೆಲವು ವರ್ಷ ಅಜ್ಞಾತವಾಸದಲ್ಲಿ ಜೀವನ ಕಳೆದರಾ? ಯಾರಿಗೂ ಮುಖ ತೋರಿಸದೇ ಬದುಕಿಬಿಟ್ಟರಾ? ಇನ್ನೊಬ್ಬರನ್ನು ಕಂಡರೆ ಸಾಕು ಮೈಲು ದೂರ ಓಡಿ ಹೋಗುತ್ತಿದ್ದರಾ? ಅದ್ಯಾಕೆ ಹೀಗೆ ಮಾಡುತ್ತಿದ್ದರು ಸ್ವೀಟಿ? ಅದ್ಯಾವ ಕಾರಣದಿಂದ ಅಷ್ಟೊಂದು ತಿಂಗಳು ಸಾರ್ವಜನಿಕ ಜೀವನದಿಂದ ಹೊರಗೆ ಉಳಿದಿದ್ದರು? ಅದಕ್ಕೆಲ್ಲ ಏನು ಕಾರಣ? ಇದಕ್ಕೆ ಅದೊಬ್ಬ ವ್ಯಕ್ತಿ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ:ತಮಿಳು ‘ಜೈಲರ್’ ವಿರುದ್ದ ಮಲಯಾಳಂ ‘ಜೈಲರ್’ ರಿಲೀಸ್: ರಜನಿ ಸಿನಿಮಾಗೆ ಟಕ್ಕರ್
ಅನುಷ್ಕಾ ಶೆಟ್ಟಿ. ಅದೊಂದು ಕಾಲದಲ್ಲಿ ಟಾಪ್ ಹೀರೋಯಿನ್. ಅಫ್ಕೋರ್ಸ್ ಈಗಲೂ ಸ್ವೀಟಿ ಸಿನಿಮಾಕ್ಕಾಗಿ ಜನರು ಕಾಯುತ್ತಿದ್ದಾರೆ. ಆದರೆ ಅದ್ಯಾಕೊ ಏನೊ ಸರಿಯಾದ ಸಮಯದಲ್ಲಿ ಅವರು ಗಟ್ಟಿ ನಿರ್ಧಾರ ಮಾಡಲಿಲ್ಲ. ಅಥವಾ ಮಾಡಿದ ನಿರ್ಧಾರ ಕೈ ಹಿಡಿಯಲಿಲ್ಲ. ಇನ್ನೇನು ಮತ್ತೆ ಎದ್ದು ಬರಬೇಕು ಎನ್ನುವಷ್ಟರಲ್ಲಿ ಹೊಸ ನೀರಿನ ಹಾವಳಿ ಆರಂಭವಾಗಿತ್ತು. ರಶ್ಮಿಕಾ, ಪೂಜಾ, ಶ್ರೀಲೀಲಾ, ಕೃತಿ…ಒಬ್ಬೊಬ್ಬರೇ ಆಕೆಯ ಜಾಗ ತುಂಬಲು ಸಜ್ಜಾಗಿದ್ದರು. ಇದೀಗ ಅದೇ ಅನುಷ್ಕಾ ಶೆಟ್ಟಿಯ ಆ ಅಜ್ಞಾತವಾಸದ ದಿನಗಳನ್ನು ಟಾಲಿವುಡ್ ಪತ್ರಕರ್ತ ಚೆಯ್ಯರು ಬಾಲು (Cheyyaru Balu) ಬಿಚ್ಚಿಟ್ಟಿದ್ದಾರೆ. ಅದ್ಯಾಕೆ ಸಾರ್ವಜನಿಕ ಜೀವನದಿಂದ ದೂರವಾಗಿದ್ದರು ಎಂದು ವಿವರಿಸಿದ್ದಾರೆ.
ಸೈಜ್ ಜೀರೋ (Size Zero) ಇದು ಅನುಷ್ಕಾ ಅಭಿನಯದ ಸಿನಿಮಾ. ಪಾತ್ರ ನೈಜವಾಗಿರಲೆಂದು ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಆ ಶೂಟಿಂಗ್ ಮುಗಿದ ಮೇಲೆ ನಿಜವಾದ ತಾಪತ್ರಯ ಶುರುವಾಯಿತು. ಆ ತೂಕ ಇಳಿಸಿಕೊಳ್ಳಲು ತುಂಬಾ ಕಷ್ಟಪಟ್ಟರು. ಕೆಲವರು ದೇಹದ ತೂಕ ಇಳಿಸುವ ಚಿಕಿತ್ಸೆ ಪಡೆಯಲು ಸಲಹೆ ನೀಡಿದರು. ಅದನ್ನು ಅವರು ಒಪ್ಪಲಿಲ್ಲ. ಹೀಗಾಗಿ ದೇಹದ ತೂಕದಿಂದ ಎಷ್ಟೋ ತಿಂಗಳು ಅವರು ಮನೆ ಬಿಟ್ಟು ಈಚೆ ಬರಲಿಲ್ಲ. ಯಾರಿಗೂ ಮುಖ ತೋರಿಸಲಿಲ್ಲ. ಒಟ್ಟಿನಲ್ಲಿ ಸಿನಿಮಾ ಹಾಗೂ ಸಾರ್ವಜನಿಕ ಬದುಕಿಂದ ಹೊರಗೆ ಉಳಿದರು.
ಬಹುಶಃ ಇದೂ ಅನುಷ್ಕಾ ಶೆಟ್ಟಿ ಕೆರಿಯರ್ ಗ್ರಾಫ್ ಇಳಿಯಲು ಇನ್ನೊಂದು ಕಾರಣವಾಯಿತು. ಸೈಜ್ ಜೀರೋ ಮುಂಚೆಯೇ ಬಾಹುಬಲಿ ಮೊದಲ ಭಾಗ ಮಾಡಿದ್ದರು. ತೂಕವನ್ನು ಹೇಗೊ ಇಳಿಸಿಕೊಂಡ ಮೇಲೆ ಎರಡನೇ ಭಾಗದಲ್ಲಿ ನಟಿಸಿದರು. ಹೀಗಾಗಿಯೇ ನೀವು ಗಮನಿಸಿ ನೋಡಿದರೆ ವ್ಯತ್ಯಾಸ ಗೊತ್ತಾಗುತ್ತದೆ. ಬಹುಶಃ ಸೈಜ್ ಜೀರೊ ಮಾಡದಿದ್ದರೆ ಒಳ್ಳೆಯದಿತ್ತೇನೊ…ಹೀರೋ ರೀತಿ ಪಾತ್ರದ ನೈಜತೆಗಾಗಿ ದಪ್ಪಗಾದರು. ಅದನ್ನು ಇಳಿಸಿಕೊಳ್ಳಲು ಸಾಕಷ್ಟು ಶ್ರಮ ಪಟ್ಟರು. ಬಾಹುಬಲಿ (Bahubali) ಎರಡನೇ ಭಾಗ ಹಿಟ್ ಆದರೂ ಅದ್ಯಾಕೊ ಉದ್ಯಮ ಅವರನ್ನು ಮತ್ತೆ ಮೊದಲಿನಂತೆ ನೋಡಲಿಲ್ಲ. ಅಲ್ಲೊಂದು ಇಲ್ಲೊಂದು ಪಾತ್ರ ಮಾಡಿದರು. ಅವೂ ಆಕಾಶ ನೋಡೋದು ಮರೆಯಲಿಲ್ಲ.
ಇಷ್ಟು ವರ್ಷದ ನಂತರ ಈಗ ಮತ್ತೆ ಎದ್ದು ನಿಂತಿದ್ದಾರೆ ಅರುಂಧತಿ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಅಷ್ಟೇನೂ ಹೆಸರು ಗೊತ್ತಿಲ್ಲದ ಹೀರೊ. ಪಕ್ಕಾ ಕಾಮಿಡಿ ಸಿನಿಮಾ. ಅದು ಹಿಟ್ ಆಗಲಿ ಫ್ಲಾಪ್ ಆಗಲಿ…ಅನುಷ್ಕಾ ಮತ್ತೆ ಮೊದಲಿನ ಜಾತ್ರೆ ಮಾಡುವುದು ಕಷ್ಟ ಕಷ್ಟ. ಕಾರಣ ರಶ್ಮಿಕಾ(Rashmika), ಪೂಜಾ, ಕೃತಿ ಹಾಗೂ ಶ್ರೀಲೀಲಾ (Sreeleela) ಕುದುರೆ ಏರಿ ಕುಂತಿದ್ದಾರೆ. ಇರೋದು ಒಂದೇ ಕುದುರೆ…ಅದರ ಮೇಲೆಯೇ ಆ ನಾಲ್ಕು ಜನ..ಸರದಿ ಸಾಲಿನಲ್ಲಿ ಸವಾರಿ ಮಾಡುತ್ತಿದ್ದಾರೆ. ಇನ್ನು ಅನುಷ್ಕಾಗೆ ಎಲ್ಲಿ ಸವಾರಿ ಮಾಡಲು ಜಾಗ ಹಾಗೂ ಯೋಗ? ಅದೃಷ್ಟ ಬಾಗಿಲು ಬಡಿದಾಗ ಮೈಮರೆಯಬಾರದಲ್ವೆ?