ದುಬೈ: ಬ್ಯಾಟಿಂಗ್ನಲ್ಲಿ ಋತುರಾಜ್ ಗಾಯಕ್ವಾಡ್ ಅವರ ಏಕಾಂಗಿ ಹೋರಾಟ ಮತ್ತು ಚೆನ್ನೈ ಬೌಲರ್ಗಳ ಶಿಸ್ತಿನ ದಾಳಿಗೆ ತಲೆಬಾಗಿದ ಮುಂಬೈ ಇಂಡಿಯನ್ಸ್ 20 ರನ್ಗಳಿಂದ ಸಿಎಸ್ಕೆ ವಿರುದ್ಧ ಸೋಲೊಪ್ಪಿಕೊಂಡಿದೆ.
ಗೆಲ್ಲಲು 156ರನ್ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮ್ಯಾನ್ಗಳು ಚೆನ್ನೈ ತಂಡದ ಬೌಲರ್ಗಳ ಶಿಸ್ತಿನ ದಾಳಿಯ ಮುಂದೆ ವಿಕೆಟ್ ಕಳೆದುಕೊಳ್ಳುತ್ತ ಸಾಗಿದರು. ಮುಂಬೈ ಪರ ಸೌರಭ್ ತಿವಾರಿ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದರೂ ಗೆಲುವು ತಂದುಕೊಡುವಲ್ಲಿ ವಿಫಲರಾದರು. ತಿವಾರಿ 50 ರನ್ (40 ಎಸೆತ, 5 ಬೌಂಡರಿ) ಸಿಡಿಸಿ ಅಜೇಯರಾಗಿ ಉಳಿದರು. ಅವರನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್ಮ್ಯಾನ್ ಕೂಡ ಗೆಲುವಿಗೆ ಶ್ರಮಿಸಲಿಲ್ಲ. ಅಂತಿಮವಾಗಿ 20 ಓವರ್ಗಳಲ್ಲಿ ಮುಂಬೈ ತಂಡ 8 ವಿಕೆಟ್ ಕಳೆದುಕೊಂಡು 136 ರನ್ ಗಳಿಸಲಷ್ಟೇ ಶಕ್ತವಾಗಿ 20 ರನ್ಗಳಿಂದ ಸೋಲು ಕಂಡಿತು.
ಚೆನ್ನೈ ಪರ ಡ್ವೇನ್ ಬ್ರಾವೋ 3 ವಿಕೆಟ್, ದೀಪಕ್ ಚಹರ್ 2 ವಿಕೆಟ್ ಮತ್ತು ಜೋಸ್ ಹ್ಯಾಸಲ್ವುಡ್ ಮತ್ತು ಠಾಕೂರ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಆರ್ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ!
ಋತುರಾಜ್ ಗಾಯಕ್ವಾಡ್ ಏಕಾಂಗಿ ಹೋರಾಟ: ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್ಕೆ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಆದರೆ ಒಂದು ಕಡೆಯಲ್ಲಿ ತನ್ನ ಬ್ಯಾಟಿಂಗ್ ವೈಭವ ಮುಂದುವರೆಸಿದ ಗಾಯಕ್ವಾಡ್ 88ರನ್( 58 ಎಸೆತ, 9 ಬೌಂಡರಿ, 4 ಸಿಕ್ಸರ್) ಸಿಡಿಸಿ ಕಡೆಯವರೆಗೂ ಹೋರಾಡಿ ತಂಡ ದ ಮೊತ್ತ 150ರ ಗಡಿದಾಟಿಸಿದರು. ಸಿಎಸ್ಕೆ ಸರದಿಯಲ್ಲಿ 3 ಜನ ಆಟಗಾರರು ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು. ಚೆನ್ನೈ ತಂಡ ನಿಗದಿತ ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು.