– ತುಂಡಾಗಿ ಬಿದ್ದಿದ್ದ ದೇಹದ ಮೇಲಿದ್ದ ಟ್ಯಾಟೂನಿಂದ ಆರೋಪಿ ಸಿಕ್ಕಿಬಿದ್ದ
ಚೆನ್ನೈ: ಪತ್ನಿಯನ್ನು ಕೊಲೆ ಮಾಡಿ, ಮೃತ ದೇಹವನ್ನು ತುಂಡು ತುಂಡು ಮಾಡಿ ಕಸದ ತೊಟ್ಟಿಗೆ ಎಸೆದಿದ್ದ ಕಿರುಚಿತ್ರ ನಿರ್ದೇಶಕ, ನಿರ್ಮಾಪಕನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಸಂಧ್ಯಾ (35) ಕೊಲೆಯಾದ ಪತ್ನಿ. ಚೆನ್ನೈನ ಬಾಲಕೃಷ್ಣ (51) ಬಂಧಿತ ನಿರ್ದೇಶಕ, ನಿರ್ಮಾಪಕ. ಸಂಧ್ಯಾ ಕೊಲೆಯಾದ ಹದಿನೈದು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದ್ದು, ಇದು ತನಿಖೆಗೆ ಹೊಸ ಟ್ವಿಸ್ಟ್ ನೀಡಿತ್ತು.
ಆರೋಪಿ ಬಾಲಕೃಷ್ಣ ಜನವರಿ 19ರಂದು ಸಂಧ್ಯಾಳನ್ನು ಕೊಲೆ ಮಾಡಿದ್ದ. ಮಾರನೇ ದಿನ ಮೃತ ದೇಹವನ್ನು ತುಂಡು ತುಂಡು ಮಾಡಿ, ಪ್ರತ್ಯೇಕ ಪ್ಲಾಸ್ಟಿಕ್ ಬ್ಯಾಗ್ಗಳಿಗೆ ತುಂಬಿದ್ದ. ಬಳಿಕ ಅದನ್ನು ಯಾರಿಗೂ ತಿಳಿಯದಂತೆ ನಗರದ ಕಸದ ಬುಟ್ಟಿಗಳಲ್ಲಿ ಎಸೆದು ಪರಾರಿಯಾಗಿದ್ದ.
ಸಂಧ್ಯಾ ನಾಪತ್ತೆಯಾಗಿರುವ ಕುರಿತು ಪೋಷಕರು ಚೆನ್ನೈ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರಿಗೆ ಕಸದಬುಟ್ಟಿಯಲ್ಲಿ ಮೃತ ದೇಹದ ಅಂಗಾಂಗಗಳು ಸಿಕ್ಕಿವೆ. ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಟ್ಯಾಟೂ ಇರುವುದು ಕಂಡು ಬಂದಿದೆ.
ಸಂಧ್ಯಾ ಪೋಷಕರು ನೀಡಿದ್ದ ದೂರಿನಲ್ಲಿ ಮಗಳ ದೇಹದ ಮೇಲೆ ಟ್ಯಾಟೂ ಗುರುತು ತಿಳಿಸಿದ್ದರು. ಇದರಿಂದಾಗಿ ಮೃತದೇಹ ಸಂಧ್ಯಾಳದ್ದೇ ಎನ್ನುವ ಶಂಕೆ ವ್ಯಕ್ತವಾಗಿತ್ತು. ಪ್ರಕರಣದ ಸಂಬಂಧ ಬಾಲಕೃಷ್ಣನನ್ನು ಬುಧವಾರ ಬಂಧಿಸಿ ವಿಚಾರಣೆ ನಡೆದಿದಾಗ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಚೆನ್ನೈ ಪೊಲೀಸ್ ಆಯುಕ್ತ ಎಕೆ ವಿಶ್ವನಾಥನ್ ತಿಳಿಸಿದ್ದಾರೆ.
ಬಾಲಕೃಷ್ಣ ನೀಡಿದ ಮಾಹಿತಿ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಬುಧವಾರ ಸಂಧ್ಯಾ ಮೃತದೇಹದ ಮತ್ತೊಂದು ಭಾಗ ಪತ್ತೆಯಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv