ಉಡುಪಿ: ಹಲವು ದಿನಗಳಿಂದ ಉಡುಪಿಯ ಕಾರ್ಕಳದಲ್ಲಿ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಹೃದಯಾಘಾತದಿಂದ. ಹಸಿದು, ಹೊಟ್ಟೆ ಖಾಲಿಯಾಗಿದ್ದ ಚಿರತೆ ಜೀವಭಯದಿಂದ ಸಾವನ್ನಪ್ಪಿರಬಹುದು ಎಂದು ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರು ಮಾಹಿತಿ ನೀಡಿದ್ದಾರೆ.
ಉಡುಪಿಯ ಕಾರ್ಕಳ ತಾಲೂಕಿನ ನಿಂಜೂರು ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಅಪ್ಪಿ ಪೂಜಾರಿ ಎಂಬವರ ಹಟ್ಟಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಕೂಡಲೇ ಸ್ಥಳೀಯರು ಅಲ್ಲಿ ಬಂದು ಸೇರಿದಾಗ, ಚಿರತೆ ಹಸುವಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ನಂತರ ಚಿರತೆ ಅಲ್ಲಿಂದ ಕಾಡಿಗೆ ಓಡಿ ಹೋಗಿತ್ತು. ಬೆಳಗ್ಗೆ ಮತ್ತೆ ಚಿರತೆ ಹಸುವಿನ ಮೇಲೆ ದಾಳಿ ನಡೆಸಲು ಬಂದಿದೆ. ಸ್ಥಳೀಯರು ಚಿರತೆಯನ್ನು ಓಡಿಸಲು ಹೋಗಿದ್ದಾರೆ. ಕೋಲುಗಳಿಂದ ಚಿರತೆಗೆ ಬಡಿದಿದ್ದಾರೆ, ಕಲ್ಲೆಸೆದಿದ್ದಾರೆ. ಈ ಸಂದರ್ಭದಲ್ಲಿ ತಪ್ಪಿಸಿಕೊಂಡು ಓಡಲು ಹೋದ ಚಿರತೆ ಗೋಡೆಗೆ ಡಿಕ್ಕಿಯಾಗಿದೆ. ಸ್ಥಳದಲ್ಲೇ ಮೂರ್ಛೆ ತಪ್ಪಿ ಬಿದ್ದಿದೆ. ಇದನ್ನು ಕಂಡು ಸ್ಥಳೀಯರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ.
ಅರಣ್ಯ ಇಲಾಖೆಯ ಇಲಾಖೆಯ ಸಿಬ್ಬಂದಿ ಬಂದು ಚಿರತೆಗೆ ಅರವಳಿಕೆ ನೀಡಿ ಚಿಕಿತ್ಸೆಗೆ ಕೊಂಡೊಯ್ದಿದ್ದಾರೆ. ಅದ್ರೆ ಚಿರತೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಚಿರತೆಯ ಹೊಟ್ಟೆಯಲ್ಲಿ ಏನೂ ಇರಲಿಲ್ಲ, ಸಿಕ್ಕಾಪಟ್ಟೆ ಹಸಿದಿತ್ತು. ಭಯದಿಂದ ಹೃದಯಾಘಾತದಿಂದ ಚಿರತೆ ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.
ನಿಂಜೂರು ವ್ಯಾಪ್ತಿಯಲ್ಲಿ ಹಲವಾರು ದಿನದಿಂದ ಚಿರತೆ ಉಪಟಳ ನೀಡುತ್ತಿತ್ತು. ಅರಣ್ಯಾಧಿಕಾರಿಗಳಿಗೂ ಗ್ರಾಮಸ್ಥರು ದೂರು ನೀಡಿದ್ದರು ಎಂದು ತಿಳಿದುಬಂದಿದೆ.