ಉಡುಪಿ: ಆಹಾರ ಅರಸುತ್ತಾ ಬಂದ ಚಿರತೆ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ. ಪ್ರಾಣ ಉಳಿಸಿಕೊಳ್ಳಲು ಪೈಪ್ ನಲ್ಲಿ ನೇತಾಡಿ, ನೇತಾಡಿ ಕೊನೆಗೆ ನೀರಿಗೆ ಬಿದ್ದು ಸಾವನ್ನಪ್ಪಿದೆ.
ಬ್ರಹ್ಮಾವರ ಸಮೀಪದ ಶಿರಿಯಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಾರಾಡಿ ನವೀನ್ ಶೆಟ್ಟಿಯವರಿಗೆ ಸೇರಿದ ಬಾವಿ ಇದಾಗಿದೆ. ನಾಯಿಯ ಬೇಟೆಗೆ ಬಂದ ಚಿರತೆ ಕಟ್ಟೆಯಿಲ್ಲದ ಬಾವಿಗೆ ಬಿದ್ದಿದೆ.
ಕಳೆದ ರಾತ್ರಿ ಬಾವಿಗೆ ಬಿದ್ದಿರುವ ಚಿರತೆಗೆ ಬಚಾವ್ ಆಗಲು ಸಾಧ್ಯವಾಗಿಲ್ಲ. ಬಾವಿಯೊಳಗೆ ಘರ್ಜನೆ ಕೇಳಿದಾಗ ಸುತ್ತಮುತ್ತಲ ಮನೆಯವರು ಓಡಿ ಬಂದಿದ್ದಾರೆ. ಟಾರ್ಚ್ ಹಾಕಿ ನೋಡಿದ್ದಾರೆ. ಆದ್ರೆ ಏಣಿ ಇಟ್ಟು ಚಿರತೆ ಮೇಲಕ್ಕೆತ್ತುವಷ್ಟು ಸಮಯ ಇರಲಿಲ್ಲ. ಜನಕ್ಕೂ ಭಯ ಕಾಡಿದೆ. ಚಿರತೆ ಈಜಲಾಗದೆ, ಬಾವಿಯೊಳಗೆ ನಿಲ್ಲಲು ವ್ಯವಸ್ಥೆ ಇಲ್ಲದೆ ಚಿರತೆ ಮೃತಪಟ್ಟಿರಬಹುದು ಎಂದು ಸ್ಥಳೀಯ ಗಣೇಶ್ ಬಾರ್ಕೂರು ಹೇಳಿದ್ದಾರೆ.
ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ. ಎರಡು ವರ್ಷದ ಗಂಡು ಚಿರತೆ ಇದಾಗಿದ್ದು, ಚಿರತೆಯನ್ನು ಮೇಲಕ್ಕೆತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv