ಚಂಡೀಗಢ: ಕಳ್ಳತನ ಆರೋಪದಡಿ ಬಂಧನಕ್ಕೊಳಗಾಗಿದ್ದ 17 ವರ್ಷದ ಬಾಲಕ ಮನನೊಂದು ಜೈಲಿನೊಳಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಫತೇಹಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಫತೇಹಾಬಾದ್ನ ಭಾಟಿಯಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿನೋದ್ ಕುಮಾರ್, ಜನವರಿ 11ರಂದು ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದರು. ಆದರೆ ಮರುದಿನ ಹಿಂದಿರುಗಿ ನೋಡಿದಾಗ ಮನೆಯ ಬೀಗ ಹೊಡೆದು 3,000 ರೂಪಾಯಿ ಕಳ್ಳತನವಾಗಿರುವುದು ಕಂಡುಬಂತು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ನೆರೆಹೊರೆಯವರನ್ನು ವಿಚಾರಿಸಿದಾಗ ಬಾಲಕನ ಮೇಲೆ ಆರೋಪ ಕೇಳಿ ಬಂದಿದೆ. ಪೊಲೀಸರು ಐಪಿಸಿ ಸೆಕ್ಷನ್ 457 ಮತ್ತು 380ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಾಲ ವಸೂಲಿಗಾಗಿ ವೃದ್ಧೆಗೆ ಬಂದೂಕು ತೋರಿಸಿ ಹೆದರಿಸಿದ ಆಸಾಮಿ
ನಂತರ ಬಾಲಕನನ್ನು ಫತೇಹಾಬಾದ್ನಿಂದ ಬೋರ್ಸೆಲ್ ಜೈಲಿಗೆ ಗುರುವಾರ ಕರೆದೊಯ್ಯಲಾಗಿತ್ತು. ಕೊರೊನಾ ಕಾರಣಾಂತರದಿಂದ ಪ್ರತ್ಯೇಕ ಕೊಠಡಿಯಲ್ಲಿ ಬಾಲಕ ಇದ್ದನು. ಶನಿವಾರ ಜೈಲು ಸಿಬ್ಬಂದಿ ಬಾಲಕನಿಗೆ ಊಟ ನೀಡಲು ಹೋದ ವೇಳೆ ಬಾಲಕ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದೀಗ ಬಾಲಕನ ತಾಯಿ ಸುಮನ್ ಅಲಿಯಾಸ್ ಸೋನು ಮತ್ತು ಸಹೋದರಿ ಮೋನು, ಫತೇಹಾಬಾದ್ ಪೊಲೀಸರು ಬಾಲಕನಿಗೆ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ.
ಬಾಲಕನಿಗೆ ಪೊಲೀಸರು ನಿರ್ದಯವಾಗಿ ಥಳಿಸಿದ್ದರಿಂದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಜೈಲಿನಲ್ಲಿ ಭದ್ರತಾ ವ್ಯವಸ್ಥೆಯ ಕೊರತೆ ಇದ್ದು, 2019ರಲ್ಲಿ 20 ಮಂದಿ ಬಂಧಿತ ಆರೋಪಿಗಳು ಪರಾರಿಯಾಗಿದ್ದರು. ಇದನ್ನೂ ಓದಿ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್