ನವದೆಹಲಿ : ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ದಲಿತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಮತಗಳ ಕ್ರೋಢೀಕರಣಕ್ಕೆ ಈ ತಂತ್ರ ರೂಪಿಸಿದೆ ಎನ್ನಲಾಗಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಿನ್ನೆ ಮಹತ್ವದ ಸಭೆ ನಡೆಸಲಾಯಿತು. ತಡರಾತ್ರಿವರೆಗೂ ನಡೆದ ಸಭೆಯಲ್ಲಿ 70 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಸುಮಾರು 5 ಸ್ಥಾನಗಳ ಬಗ್ಗೆ ಒಮ್ಮತ ಮೂಡದ ಕಾರಣ ಮತ್ತೊಮ್ಮೆ ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆ ಸೇರಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು ಇಂದು ಅಥವಾ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಇದನ್ನೂ ಓದಿ: ರೇಷನ್ ಕಾರ್ಡ್ ಇದೆಯಾ: ಸ್ನಾನ ಮಾಡ್ತಿದ್ದ ವ್ಯಕ್ತಿ ಬಳಿ ಹೋಗಿ ಬಿಜೆಪಿ ಶಾಸಕನ ಪ್ರಶ್ನೆ
ಸಭೆಯಲ್ಲಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಸ್ಪರ್ಧೆ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ. ಪ್ರಸ್ತುತ ಚಮ್ಕೌರ್ ಸಾಹಿಬ್ ಕ್ಷೇತ್ರದ ಶಾಸಕರಾಗಿರುವ ಚನ್ನಿ, ಅವರನ್ನು ದಲಿತರು ಅತಿ ಹೆಚ್ಚು ಸಂಖ್ಯೆಯಲ್ಲಿರುವ ದೋಬಾ ಪ್ರದೇಶದಲ್ಲಿ ಬರುವ ಆದಂಪುರ ಕ್ಷೇತ್ರದಿಂದಲೂ ಕಣಕ್ಕಿಳಿಸಲು ಚಿಂತಿಸಲಾಗಿದೆ. ಇದನ್ನೂ ಓದಿ: ವಿಶೇಷ ವಿಕಲಚೇತನ ಅಪ್ಪು ಅಭಿಮಾನಿಯಿಂದ ಬೆಂಗಳೂರಿಗೆ ಪಾದಯಾತ್ರೆ
ಸಮೀಕ್ಷೆಗಳ ಪ್ರಕಾರ ಗೆಲುವಿನ ಸನಿಹದಲ್ಲಿರುವ ಕಾಂಗ್ರೆಸ್, ದಲಿತರ ಮತಗಳನ್ನು ಸೆಳೆಯಲು ಈ ತಂತ್ರ ರೂಪಿಸುತ್ತಿದೆ ಎನ್ನಲಾಗಿದ್ದು, 1 ಅಥವಾ 2 ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಫೆಬ್ರವರಿ 10 ರಿಂದ ಪಂಚ ರಾಜ್ಯಗಳ ಚುನಾವಣೆ ಆರಂಭವಾಗಲಿದ್ದು, 2ನೇ ಹಂತದಲ್ಲಿ ಪಂಜಾಬ್ನಲ್ಲಿ ಚುನಾವಣೆ ನಡೆಯಲಿದೆ.