ಬೆಳಗಾವಿ(ಚಿಕ್ಕೋಡಿ): ತೆರೆದ ಸಭೆಯಲ್ಲೇ ಮೂವರು ಶಾಸಕರಿಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಹುಕ್ಕೇರಿಯ ಶ್ರೀಮಠದ ದಸರಾ ಉತ್ಸವ ಉದ್ದೇಶಿಸಿ ಮಾತನಾಡುವಾಗ ಸ್ವಾಮೀಜಿ ಎಚ್ಚರಿಸಿದ್ದಾರೆ.
ಹಿರೇಮಠದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ಹುಕ್ಕೇರಿಯಲ್ಲಿ ಬಿದ್ದು ಹೋದ ಮನೆಗಳಿಗೆ ಪರಿಹಾರ ನೀಡಲು ಮುಂದಾಗಿದ್ದ ಸಂಸ್ಥೆಯ ಕುರಿತು ಮಾತನಾಡುತ್ತಿದ್ದರು. ಒಂದು ಮನೆಗೆ 1 ಲಕ್ಷ ರೂ., ಇನ್ನೊಂದು ಮನೆಗೆ 1 ಲಕ್ಷ 20 ಸಾವಿರ ಪರಿಹಾರ ನೀಡಲು ಸಂಸ್ಥೆಯೊಂದು ಮುಂದೆ ಬಂದಿದೆ ಎಂದು ಸ್ವಾಮೀಜಿ ಅವರು ಹೇಳುತ್ತಿದ್ದಂತೆ ಶಾಸಕ ಉಮೇಶ್ ಕತ್ತಿ ಮಧ್ಯೆ ಪ್ರವೇಶಿಸಿದರು. ನಾವು 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ಹೇಳಿಕೆ ನೀಡಿದರು. ಆಗ ಉಮೇಶ್ ಕತ್ತಿ ಮಾತಿಗೆ ಶಾಸಕ ಆನಂದ ಮಾಮನಿ ಮತ್ತು ದುರ್ಯೋಧನ ಐಹೊಳೆ ಕೂಡ ದನಿಗೂಡಿಸಿದರು. ಇಲ್ಲ ಇಲ್ಲ ಅದರಲ್ಲಿ ಎರಡು ಮಾತಿಲ್ಲ ಎಂದ ಮೂವರು ಶಾಸಕರು ಹೇಳಿದರು.
ಶಾಸಕರ ಮಾತಿಗೆ ಸ್ವಾಮೀಜಿ ಅವರು ನಗುತ್ತಾ ‘ಕೊಡ್ತಿರಿಲ್ಲಪ್ಪಾ ಮತ್ತ ನನ್ನ ಫಜೀತಿ ಮಾಡಬ್ಯಾಡ್ರಿ’ ಎಂದು ಶಾಸಕರಿಗೆ ಟಾಂಗ್ ಕೊಟ್ಟರು. ಸ್ವಾಮೀಜಿ ಮಾತಿಗೆ ಇಲ್ಲ ಇಲ್ಲ ಖಂಡಿತವಾಗಿಯೂ ಕೊಡುತ್ತೇವೆ ಎಂದು ಮೂವರು ಬಿಜೆಪಿ ಶಾಸಕರು ಹೇಳಿದರು. ಆಗ ಹೇಳಿದ ಹಾಗೆ ಪರಿಹಾರ ಕೊಡಲಿಲ್ಲವೆಂದರೆ ವಿಧಾನಸೌಧ ಮತ್ತು ಸಂಸತ್ತಿನವರೆಗೂ ನಾವು ಬರುತ್ತೇವೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು. ಇಂತಹ ಸ್ವಾರಸ್ಯಕರ ಘಟನೆಗೆ ಹುಕ್ಕೇರಿಯ ಹಿರೇಮಠದ ದಸರಾ ಉತ್ಸವ ಸಾಕ್ಷಿಯಾಯಿತು.