ನಿನ್ನೆ ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್ ನಲ್ಲಿ ತಮ್ಮದೇ ಕಂಪನಿಯ ಮಾಜಿ ನೌಕರರಿಂದ ಹತ್ಯೆಯಾದ ಚಂದ್ರಶೇಖರ್ ಗುರೂಜಿ ಸಾವಿಗೆ ಸ್ಯಾಂಡಲ್ ವುಡ್ ನ ಅನೇಕರು ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ. ಹಾಡು ಹಗಲೆ ಇಂಥದ್ದೊಂದು ಕೃತ್ಯ ನಡೆದಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. ಮನುಷ್ಯನ ಮನಸ್ಥಿತಿಯ ಬಗ್ಗೆಯೂ ಅವರು ಚರ್ಚೆ ಮಾಡಿದ್ದಾರೆ. ಕೊಲ್ಲುವುದು ಎಲ್ಲದಕ್ಕೂ ಪರಿಹಾರವಲ್ಲ ಎಂಬ ಮಾತುಗಳನ್ನೂ ಆಡಿದ್ದಾರೆ.
ನಿನ್ನೆಯಷ್ಟೇ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಈ ಹತ್ಯೆಯ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ‘ನನ್ನ ಆತ್ಮೀಯ ಸ್ನೇಹಿತರು, ನನ್ನ ಅವರ ಒಡನಾಟ ಅಧ್ಯಾತ್ಮಿಕ ಹಾಗೂ ವಾಸ್ತು ಸಂಬಂಧಿಸಿದ್ದು. ಸದಾ ನನ್ನ ಒಳಿತು ಬಯಸುತ್ತಿದ್ದ ಆತ್ಮ. ನಾವಿಬ್ಬರೂ ಮಾತಿಗೆ ಕೂತರೆ ಗಂಟೆಗಟ್ಟಲೇ. ನನ್ನ ರಾಜ್ಯಸಭಾ ಸ್ಥಾನಕ್ಕೆ ತಮಗೆ ಸಿಕ್ಕಂತೆ ಸಂಭ್ರಮಿಸಿದ್ದರು. ಅವರ ಅಮಾನುಷವಾಗಿ ಕೊಲೆಗೈದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ. ಇಂದಿನ ಕಾಲದಲ್ಲಿ ಯಾರನ್ನು ನಂಬೋದು’ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್
ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಕೂಡ ಫೇಸ್ ಬುಕ್ ನಲ್ಲಿ ಹತ್ಯೆಯ ವಿಡಿಯೋವನ್ನು ಹಂಚಿಕೊಂಡು, ‘ನಮ್ಮ ದೇಶದಲ್ಲಿ ಇಷ್ಟು ಸುಲಭವಾಗಿ ಒಬ್ಬರ ಜೀವ ತಗೆಯಬಹುದಾ? ಎಷ್ಟು ಘೋರ. ಗುರೂಜಿಯಾದರೂ, ಟೈಲರ್ ಆದರೂ ಮೃತರ ಆತ್ಮಕ್ಕೆ ಶಾಂತಿ ಕೋರುವುದೊಂದೇ ನಮ್ಮ ಕೈಲಿರೋದು’ ಎಂದು ಬರೆದುಕೊಂಡಿದ್ದಾರೆ.