– ಕೈಗಾರಿಕಾ ಉದ್ದೇಶಕ್ಕೆ ಅನುಮತಿ ಪಡೆದು ಕ್ರಷರ್ ಆರಂಭಿಸಲು ಹೊರಟಿದ್ದಾರೆಂಬ ಆರೋಪ
ಚಾಮರಾಜನಗರ: ಗ್ರಾಮದ ಹತ್ತಿರ ಕ್ರಷರ್ ನಿರ್ಮಾಣ ಮಾಡುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕ್ರಷರ್ ನಿರ್ಮಾಣ ಮಾಡುವುದಕ್ಕೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಗ್ರಾಮದ 300 ಮೀಟರ್ ದೂರದಲ್ಲೇ ಕ್ರಷರ್ ಆರಂಭಕ್ಕೆ ಎ.ಮಧುಸೂದನ್ ಎಂಬವರು ಮುಂದಾಗಿದ್ದಾರೆ. ತನ್ನ 2.18 ಎಕರೆ ಜಮೀನಿನಲ್ಲಿ ಕೈಗಾರಿಕಾ ಉದ್ದೇಶಕ್ಕೆಂದು ಅನುಮತಿ ಪಡೆದು, ಕ್ರಷರ್ ನಿರ್ಮಾಣಕ್ಕೆ ತಯಾರಿ ನಡೆಸಿದ್ದಾರೆ.
ಜಮೀನಿಗೆ ಬಂದ ಲಾರಿಯನ್ನು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕ್ರಷರ್ ಮಾಲೀಕರ ಸಹಚರರು ಹಾಗೂ ಗ್ರಾಮಸ್ಥರ ನಡುವೆ ಹೈಡ್ರಾಮಾ ನಡೆದಿದೆ. ಡಾ ಬಿ.ಆರ್.ಅಂಬೇಡ್ಕರ್ ಫೋಟೊ ಹಿಡಿದು ಲಾರಿ ಮುಂದೆ ಪ್ರತಿಭಟನಾಕಾರರು ಮಲಗಿದ್ದಾರೆ. ಈ ವೇಳೆ ಗ್ರಾಮಸ್ಥರ ಮೇಲೆ ಕ್ರಷರ್ ಮಾಲೀಕನ ಸಹಚರರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
ಅಂಬೇಡ್ಕರ್ ಫೋಟೊ ಕಿತ್ತೆಸೆದು ಹಲ್ಲೆ ಮಾಡಿರುವ ಆರೋಪ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಬೇಗೂರು ಆಸ್ಪತ್ರೆಗೆ ರವಾನಿಸಲಾಗಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.