ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ. ಬಿರ್ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸುವ ಕೆಲಸ ನನ್ನಿಂದ ನಡೆದಿದ್ದರೆ ನೇಣಿಗೆ ಹಾಕಿ ಎಂದು ಪ್ರಗತಿಪರ ಸಂಘಟನೆ ಮುಖಂಡರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕರೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂಬೇಡ್ಕರ್ ಬಗ್ಗೆ ಶಿಕ್ಷಣ ಇಲಾಖೆಯಲ್ಲಿ ಆದ ಅಚಾತುರ್ಯದ ಬಗ್ಗೆ ಸ್ಪಷ್ಟನೆ ನೀಡಿದರು. ಅಂಬೇಡ್ಕರ್ ಬಗ್ಗೆ ಅವಮಾನಿಸಿದರೆ ಚಾಮರಾಜನಗರದ ಸರ್ಕಲ್ ನಲ್ಲಿ ನನ್ನನ್ನು ನೇಣಿಗೆ ಹಾಕಿ. ಖಾಸಗಿ ಸಂಸ್ಥೆ, ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಅಚಾತುರ್ಯ ನಡೆದಿದೆ. ಹೀಗಾಗಿ ನಿರ್ದೇಶಕರು ಸೇರಿ ಮೂರು ಮಂದಿಯನ್ನು ಅಮಾನತು ಮಾಡಲಾಗಿದೆ ಎಂದರು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಈಗಾಗಲೇ ಸೂಚನೆ ನೀಡಿದ್ದೇವೆ. ನಿರ್ದೇಶಕರು, ಆಯುಕ್ತರ ಗಮನಕ್ಕೆ ತಾರದೆ ಅನುಮೋದನೆ ಪಡೆಯದೇ ಏಕಾಏಕಿ ಕೈಪಿಡಿಯನ್ನು ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ನಿರ್ದೇಶಕರಿಗೆ ನೀಡಿದ ಸೂಚನೆ ಉಲ್ಲಂಘಿಸಿದ್ದು ಕರ್ತವ್ಯ ಲೋಪವಾಗಿದೆ. ಇದು ನಮ್ಮ ತಪ್ಪಲ್ಲ. ಕೂಡಲೇ ನಮ್ಮ ಗಮನಕ್ಕೆ ಬಂದ ತಕ್ಷಣ ವೆಬ್ ಸೈಟ್ ನಿಂದ ಡಿಲೀಟ್ ಮಾಡಲಾಗಿದೆ. ಬಾಬಾ ಸಾಹೇಬರ ಬಗ್ಗೆ, ಅವರ ಕೊಡುಗೆ ಬಗ್ಗೆ ಹೆಮ್ಮೆ ಮತ್ತು ಗೌರವವಿದೆ ಎಂದು ತಿಳಿಸಿದ್ರು.
ಏನಿದು ವಿವಾದ?
ಶಿಕ್ಷಣ ಇಲಾಖೆ ಹೊರಡಿಸಿದ್ದ ಸಂವಿಧಾನ ದಿನಾಚರಣೆಯ ಸುತ್ತೋಲೆಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂದು ಬರೆಯಲಾಗಿತ್ತು. ಈ ಕುರಿತು ಬಾರಿ ವಿವಾದ ಉಂಟಾಗಿ ಶಿಕ್ಷಣ ಇಲಾಖೆ ವಿರುದ್ಧ ಸಾಕಷ್ಟು ವಿರೋಧಗಳು ಕೂಡ ವ್ಯಕ್ತವಾಗಿತ್ತು. ಪ್ರಗತಿಪರ ಸಂಘಟನೆಗಳು ನಗರದ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಿ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿತ್ತು.