ಚಾಮರಾಜನಗರ: ಗಡಿ ಜಿಲ್ಲೆಯ ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದಲ್ಲಿ ಕೇಂದ್ರದ ಪೌರತ್ವ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಗುಂಡ್ಲುಪೇಟೆ ಪಟ್ಟಣದ ವಿವಿಧ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ತ್ರಿವರ್ಣ ಧ್ವಜ ಹಿಡಿದ ಪ್ರತಿಭಟನಾಕಾರರು ಪೌರತ್ವ ವಿರುದ್ಧ ಧಿಕ್ಕಾರ ಕೂಗುತ್ತಾ ಈದ್ಗಾ ಮೈದಾನದ ಬಳಿ ತೆರಳಿದರು. ಈದ್ಗಾ ಮೈದಾನದಲ್ಲಿ ರಾಷ್ಟ್ರಗೀತೆ, ವಂದೆ ಮಾತರಂ ಗೀತೆಯನ್ನು ಹಾಡುವ ಮೂಲಕ ನಾವೆಲ್ಲ ಭಾರತೀಯರು ಎನ್ನುವ ಸಂದೇಶ ಸಾರುವ ಕೆಲಸಕ್ಕೆ ಮುಂದಾದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕೇರಳದಿಂದ ಪ್ರತಿಭಟನಾಕಾರರು ಆಗಮಿಸುವ ಶಂಕೆ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದ್ದರು. ಭದ್ರತೆಗಾಗಿ 2 ಕೆ.ಎಸ್.ಆರ್.ಪಿ, 6 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡುವ ಮೂಲಕ ಬಿಗಿ ಪೋಲಿಸ್ ಭದ್ರತೆ ಕೈಗೊಳ್ಳಲಾಗಿತ್ತು.