– ಅಬಕಾರಿ ಅಕ್ರಮ ಪ್ರಕರಣದಲ್ಲಿ ಸಚಿವ ತಿಮ್ಮಾಪೂರ ರಾಜೀನಾಮೆಗೆ ಆಗ್ರಹ
ಬೆಂಗಳೂರು: ಕಾಂಗ್ರೆಸ್ ದುರಾಡಳಿತ ಮೇರೆ ಮೀರಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ಷೇಪಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಎಂದರೆ ಕಮಿಷನ್, ಕರಪ್ಷನ್, ಲೂಟಿ, ದುಂಡಾವರ್ತಿ ಎಂದು ಮಾತನಾಡುತ್ತಿದ್ದೆವು. ಕಾಂಗ್ರೆಸ್ ಇದೀಗ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಅಧಿಕಾರವೊಂದಿದ್ದರೆ ಸಾಕು, ಏನು ಬೇಕಾದರೂ ಮಾಡಬಹುದು. ಹೇಗೆ ಬೇಕಾದರೂ ಮೆರೆಯಬಹುದು ಎಂಬ ದುರ್ನಡತೆಯನ್ನು ಮೈಗೂಡಿಸಿಕೊಂಡಂತೆ ಕಾಣುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಲೋಕಭವನಕ್ಕೆ ಭಾಷಣ ಕಳುಹಿಸಿದ್ದ ಸರ್ಕಾರ – ಗಣರಾಜ್ಯೋತ್ಸವ ಭಾಷಣಕ್ಕೆ ರಾಜ್ಯಪಾಲರ ಅಧಿಕೃತ ಮುದ್ರೆ
ಹೊರದೇಶದಿಂದ ಪ್ರವಾಸಕ್ಕಾಗಿ ಬಂದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಇದೊಂದು ದೊಡ್ಡ ವಿಷಯವಾಗಿತ್ತು. ಇದು ಕೇವಲ ರಾಷ್ಟ್ರೀಯ ವಿಚಾರವಲ್ಲ, ಅಂತರರಾಷ್ಟ್ರೀಯ ವಿಚಾರ. ಇದನ್ನು ಗೌರವಾನ್ವಿತ ಎಂಪಿ (ಸಂಸದ) ರಾಜಶೇಖರ ಹಿಟ್ನಾಳ್ ಅವರು ಎಷ್ಟು ಕೇವಲವಾಗಿ ಹೇಳಿದ್ದಾರೆಂದರೆ, ಅದೊಂದು ಸಣ್ಣ (ಮೈನರ್) ಘಟನೆಯಂತೆ. ಈ ಕಾಂಗ್ರೆಸ್ಸಿನ ಸಂಸ್ಕೃತಿ ಎಂಥದ್ದೆಂದು ಗೊತ್ತಾಯಿತಲ್ಲವೇ ಎಂದು ಪ್ರಶ್ನಿಸಿದರು.
ಇಷ್ಟೊಂದು ನೀಚತನಕ್ಕೆ ಅಧಿಕಾರ ನಡೆಸುವವರು ಇಳಿದರೆ ಏನೆನ್ನಬೇಕು? ಒಬ್ಬರು ಮಹಿಳೆಯ ಮೇಲೆ ಆಗಿರುವ ಅತ್ಯಾಚಾರವನ್ನೇ ನಾವು ಖಂಡಿಸಬೇಕು. ಅದು ಸಣ್ಣ ವಿಷಯ ಎಂದು ಯಾರೂ ಭಾವಿಸಬಾರದು. ಅದರಲ್ಲೂ ಅವರನ್ನು ಕೊಲೆ ಮಾಡಿದ ಘಟನೆ. ಎಷ್ಟೊಂದು ನೀಚತನದಿಂದ ಕಾಂಗ್ರೆಸ್ಸಿನವರು ಈ ಮಾತುಗಳನ್ನು ಆಡಿದ್ದಾರೆಂದರೆ, ಅವರ ನೀಚತನಕ್ಕೆ ಜನರು ಉತ್ತರ ಕೊಡಬೇಕಿದೆ. ಬುದ್ಧಿ ಕಲಿಸುವ ಕೆಲಸ ಮಾಡಲೇಬೇಕಾಗಿದೆ ಎಂದು ಮನವಿ ಮಾಡಿದರು.
ಇವತ್ತು ಕರ್ನಾಟಕವೇ ದೇಶದ ಮುಂದೆ ತಲೆತಗ್ಗಿಸುವ ಕೆಲಸವನ್ನು ರಾಜಶೇಖರ ಹಿಟ್ನಾಳ್ ಅವರು ಮಾಡಿದ್ದಾರೆ. ಮೊದಲು ಅವರು ಕ್ಷಮೆ ಕೇಳಬೇಕು. ಕರ್ನಾಟಕದ ಗೌರವ ಹರಾಜಾಗಿದೆ. ಕಾಂಗ್ರೆಸ್ ಪಕ್ಷ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು. ಅವರನ್ನು ಉಚ್ಚಾಟಿಸಿದರೆ ನಿಮ್ಮ ಪಕ್ಷ ಮಹಿಳೆಯರಿಗೆ ಗೌರವ ಕೊಡುತ್ತದೆ. ಇಂಥ ವಿಷಯದಲ್ಲಿ ಗಂಭೀರತೆ ಹೊಂದಿದೆ ಎಂದು ತಿಳಿಸಬಹುದು. ಇಲ್ಲವಾದರೆ, ನಿಮ್ಮ ಯೋಗ್ಯತೆ ಅಷ್ಟೇ ಎಂಬುದನ್ನು ನಾವು ಹೇಳಲೇಬೇಕಾಗುತ್ತದೆ ಎಂದು ನುಡಿದರು.
ಕಾಂಗ್ರೆಸ್ ಸರ್ಕಾರವು ಪೊಲೀಸ್ ಇಲಾಖೆಯನ್ನು ನಿರ್ಲಿಪ್ತ ಮಾಡಿದೆ
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯವರ ಮಾಡೆಲ್ ಹೌಸ್ಗೆ ಬೆಂಕಿ ಹಾಕುವ ಕೆಲಸ ನಿನ್ನೆ ನಡೆದಿದೆ. ಕಾಂಗ್ರೆಸ್ಸಿನ ದುರಾಡಳಿತ ಇನ್ನೂ ಯಾವ ಮಟ್ಟಕ್ಕೆ ಹೋಗಿದೆ ಎಂಬುದು ಈಗ ಗೊತ್ತಾಗುತ್ತಿದೆ. ಇವರೇ ಇವರ ಕಾರ್ಯಕರ್ತನನ್ನು ಕೊಲೆ ಮಾಡಿ, ಸರ್ಕಾರದ ಹಣ 25 ಲಕ್ಷ ನಗದು ಕೊಟ್ಟಿದ್ದಾರೆ. ನಗದಾಗಿ ಹಣ ಕೊಡಲು ಆಗುವುದಿಲ್ಲ ಎಂದರು. ನಗದು ಕೊಡುವುದಾದರೆ, ಅದಕ್ಕೆ ಲೆಕ್ಕ ಇರಬೇಕು. ಆದಾಯ ತೆರಿಗೆ ಪಾವತಿ ಮಾಡಿರಬೇಕು. ಸರ್ಕಾರದ ಹಣ ನೀವು ಚೆಕ್ ಮೂಲಕವೇ ಕೊಡಬೇಕಿತ್ತು ಎಂದು ತಿಳಿಸಿದರು. ನಾನು ಗೋಲ್ಡನ್ ಸ್ಪೂನ್ ಜೊತೆ ಹುಟ್ಟಿದ್ದಾಗಿ ಹೇಳುವ ಶಾಸಕ, ಅವನ ಕಡೆಯಿಂದ ಹಣ ಕೊಡಿಸಬೇಕಿತ್ತು ಎಂದು ಆಗ್ರಹಿಸಿದರು. ಕೊಲೆ ಮಾಡಿದ ಅವರನ್ನೇ ಬಂಧಿಸಬೇಕಿತ್ತು. ಇವತ್ತಿನ ವರೆಗೆ ಬಂಧಿಸಿಲ್ಲ ಎಂದು ಆಕ್ಷೇಪಿಸಿದರು. ನಿಮ್ಮ ಪೊಲೀಸ್ ಇಲಾಖೆ ಏನು ಕಡುಬು ತಿನ್ನುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರವು ಪೊಲೀಸ್ ಇಲಾಖೆಯನ್ನು ನಿರ್ಲಿಪ್ತ ಮಾಡಿದೆ ಎಂದು ಟೀಕಿಸಿದರು. ಇದನ್ನು ಹೇಳಲು ಬಹಳ ನೋವಾಗುತ್ತದೆ. ನಮಗೂ ಕೂಡ ಸಿಟ್ಟು ಬರುತ್ತದೆ. ಆದರೆ, ನಾವು ಏನು ಮಾಡಬೇಕು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಇದನ್ನೂ ಓದಿ: ನಗರಸಭೆ ಪೌರಾಯುಕ್ತೆಗೆ ಬೆದರಿಕೆ – ರಾಜೀವ್ ಗೌಡ ನಿವಾಸದ ಮೇಲೆ ಪೊಲೀಸರ ದಾಳಿ
ಈಗ ಮನೆ ಸುಟ್ಟಾಯಿತಲ್ಲವೇ? ಏನು ಮಾಡುತ್ತೀರಿ?
ಜೀವ ಸಮೇತ ನಿಮ್ಮನ್ನು ಸುಡುತ್ತೇನೆ, ಮನೆ ಸುಡುತ್ತೇನೆ ಎಂದಿದ್ದರು. ಈಗ ಮನೆ ಸುಟ್ಟಾಯಿತಲ್ಲವೇ ಎಂದು ಕೇಳಿದರು. ಅವರು ಇರುವ ಮನೆ ಸುಡಲು ಆಗಿಲ್ಲ. ಬೇರೊಂದು ಮನೆ ಸುಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಹೇಳಿಕೆ ಕೊಟ್ಟು ಮನೆ ಸುಟ್ಟಿದ್ದಾರೆ. ಈಗ ಏನು ಮಾಡುತ್ತೀರಿ ಮಾನ್ಯ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಮುಖ್ಯಮಂತ್ರಿಗಳೇ ನಿಮ್ಮ ದೇಹದಲ್ಲಿ ಸಮಾಜವಾದದ ರಕ್ತ ಹರಿಯುತ್ತಿದ್ದರೆ, ಸತ್ಯ, ಧರ್ಮ ಎತ್ತಿ ಹಿಡಿಯಬೇಕೆಂದಿದ್ದರೆ, ನಿಮಗೇನಾದರೂ ಮಾನವೀಯತೆ ಇನ್ನೂ ಉಳಿದಿದ್ದರೆ ಇವುಗಳ ಮೇಲೆ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಏನೂ ಮಾಡದೇ ಇದ್ದವರನ್ನೂ ಜೈಲಲ್ಲಿ ಇಡುತ್ತೀರಿ
ಶಿಡ್ಲಘಟ್ಟದಲ್ಲಿ ಅಧಿಕಾರಿ ಮೇಲೆ ರಾಜೀವ್ ಗೌಡ ದರ್ಪ ಮಾಡಿದ್ದರು. ಕೋರ್ಟಲ್ಲಿ ಅವರ ಎಫ್ಐಆರ್ ವಜಾ ಮಾಡಿ ಎಂದು ಕೊಟ್ಟಾಗ ತಿರಸ್ಕಾರ ಆಗುವವರೆಗೆ ಕಾಯುತ್ತಿದ್ದಿರಿ. ನೀವು ಅವರನ್ನು ಉಚ್ಚಾಟನೆ ಮಾಡಿಲ್ಲ; ಕೇವಲ ಅವರನ್ನು ಅಮಾನತಿನಲ್ಲಿ ಇಟ್ಟಿದ್ದೀರಿ. ನೀವೇ ಅವರನ್ನು ರಕ್ಷಣೆ ಮಾಡುತ್ತಿದ್ದೀರೆಂದು ಎಲ್ಲ ಕಡೆ ಬರುತ್ತಿದೆ. ಬೇರೆಯವರನ್ನು ಒಂದೆರಡು ಗಂಟೆಯಲ್ಲೇ ಹಿಡಿದುಕೊಂಡು ಬರುತ್ತೀರಿ. ಏನೂ ಮಾಡದೇ ಇದ್ದವರನ್ನೂ ಜೈಲಲ್ಲಿ ಇಡುತ್ತೀರಿ ಎಂದು ಆಕ್ಷೇಪಿಸಿದರು.
ಅದೆಂಥ ನೀಚಗೆಟ್ಟ ಸರ್ಕಾರ ನಿಮ್ಮದು..?
ಇವರು ನಿಮ್ಮ ಕಾರ್ಯಕರ್ತರಾಗಿದ್ದು, ಹಿರಿಯ ಸಚಿವರ ಪತ್ನಿಯ ಜೊತೆ ಸದಾ ಸಂಪರ್ಕದಲ್ಲಿದ್ದಾರೆ. ಅವರಿಗೆ ಸಂದೇಶ ಕೊಡುತ್ತಿದ್ದಾರೆ. ರಕ್ಷಿಸುತ್ತಿದ್ದಾರೆಂದು ಎಲ್ಲ ಕಡೆ ಮಾತನಾಡುತ್ತಿದ್ದಾರೆ ಎಂದು ಗಮನ ಸೆಳೆದರು. ಇದು ಮಾಧ್ಯಮಗಳಲ್ಲೂ ಬರುತ್ತಿದೆ. ನೀವು ಅದೆಂಥ ನೀಚಗೆಟ್ಟ ಸರಕಾರ ನಡೆಸುತ್ತ ಇದ್ದೀರಿ ಎಂದು ಪ್ರಶ್ನಿಸಿದರು.
ನೀವು ಸಂವಿಧಾನದ ರಕ್ಷಕರಲ್ಲ, ಭಕ್ಷಕರು
ನೀವು ಸಂವಿಧಾನದ ರಕ್ಷಕರಲ್ಲ, ಭಕ್ಷಕರು ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಡಾ. ಬಾಬಾ ಸಾಹೇಬ ಅಂಬೇಡ್ಕರರ ಹೆಸರು ಹೇಳುತ್ತ ಹೇಳುತ್ತ ಅವರಿಗೆ ಅಪಮಾನ ಮಾಡುವವರು ಎಂದು ಟೀಕಿಸಿದರು. ಗಾಂಧೀಜಿ ಅವರ ಹೆಸರನ್ನು ಹೇಳಿ ಹೇಳಿ ಅವರನ್ನು ಮತಬ್ಯಾಂಕಿಗಾಗಿ ಬಳಸಿಕೊಂಡಿದ್ದಾರೆ. ಇವರೆಲ್ಲರನ್ನೂ ಸಮಾಧಿ ಮಾಡಿದ ಸಂಸ್ಕೃತಿ ಕಾಂಗ್ರೆಸ್ಸಿನದು ಎಂದು ದೂರಿದರು. ರಾಜೀವ್ ಗೌಡನನ್ನು ಕೆ.ಹೆಚ್.ಮುನಿಯಪ್ಪ ರಕ್ಷಿಸುತ್ತಿರುವುದಾಗಿ ಕೆಲವರು ನನಗೆ ಫೋನ್ ಮಾಡಿ ಹೇಳಿದ್ದಾರೆ. ನನಗೆ ಅದು ಗೊತ್ತಿಲ್ಲ. ಹೌದೇ ಇಲ್ಲವೇ ಎಂದು ಸರಕಾರ ಹೇಳಲಿ ಎಂದು ಆಗ್ರಹಿಸಿದರು. ಜಿಬಿಎ ಚುನಾವಣೆ ಹತ್ತಿರ ಬರುತ್ತಿದೆ. ಬೆಂಗಳೂರು ಸುತ್ತ 3ರಿಂದ 4 ಲಕ್ಷ ರೋಹಿಂಗ್ಯಾ ಮತದಾರರು ಮತ್ತು ಬಾಂಗ್ಲಾ ದೇಶೀಯರು ಇದ್ದಾರೆ ಎಂದು ಗಮನ ಸೆಳೆದರು. ಎಸ್ಐಆರ್ ಆಗಬೇಕಿದೆ ಎಂದು ಒತ್ತಾಯಿಸಿದರು. ಇದರ ಕುರಿತು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೆವು. ಯಾರೂ ಉತ್ತರ ಕೊಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.


