ಬೆಂಗಳೂರು: ಸಿಇಟಿಯಲ್ಲಿ (CET Exam) ಔಟ್ ಆಫ್ ಸಿಲಬಸ್ನ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೊಟ್ಟಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಿರುದ್ಧ ಸಿಡಿದೆದ್ದ ಎಬಿವಿಪಿ (ABVP) ಕಾರ್ಯಕರ್ತರು ಇಂದು ಬೆಂಗಳೂರಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಕೆಇಎ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತ ಉನ್ನತ ಶಿಕ್ಷಣ ಇಲಾಖೆ ಏಪ್ರಿಲ್ 18,19 ರಂದು ನಡೆದಿದ್ದ ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್ (Out of Syllabus) ಪ್ರಶ್ನೆಗಳ ವಿಚಾರವಾಗಿ ತಜ್ಞರ ಸಮಿತಿ ರಚಿಸಿದೆ.
ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಆದೇಶ ಹೊರಡಿಸಿದ್ದಾರೆ. ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ 4 ವಿಷಯಗಳಿಗೂ ಪ್ರತ್ಯೇಕ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು,ತಕ್ಷಣವೇ ತಜ್ಞರ ಸಮಿತಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲ ಧರ್ಮದ ತಾಯಂದಿರು ಗಂಡ-ಮಕ್ಕಳನ್ನ ಕಳೆದುಕೊಳ್ತಾರೆ: ಯತೀಂದ್ರ
ತಜ್ಞರ ವರದಿ ಬಂದ ಬಳಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುವ ಭರವಸೆಯನ್ನು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ನೀಡಿದ್ದಾರೆ. ಈ ಮಧ್ಯೆ ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆ ಕೇಳಿರುವ ಪ್ರಶ್ನೆ ಪತ್ರಿಕೆ ಗೊಂದಲದ ಬಗ್ಗೆ ವರದಿ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.
ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್ ರಿಂದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆ ನೀಡಿದ್ದು,ಕೂಡಲೇ ವಿಸ್ತ್ರತ ವರದಿ ನೀಡುವಂತೆ ಕೆಇಎಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ:ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂದು ಕಾಂಗ್ರೆಸ್ ಹೇಳಿತ್ತು: ಮೋದಿ ಕಿಡಿ