ಬೆಂಗಳೂರು: ಸೆಂಚುರಿ ಕ್ಲಬ್ನ್ನು ಯಾವುದೇ ಕಾರಣಕ್ಕೂ ಪಾರ್ಕ್ ಜೋನ್ನಿಂದ ಕೈ ಬಿಡುವ ಪ್ರಶ್ನೆ ಇಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ನಿಯಮ 330ರ ಅಡಿ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ವಿಷಯ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ಪಾರ್ಕ್ ಜೋನ್ನಿಂದ ಸೆಂಚುರಿ ಕ್ಲಬ್ ಹೊರಗಿಡಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಕೆಐಎಡಿಬಿ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಬೇಡ ಎಂದವರಿಗೆ ಅಭಿವೃದ್ಧಿಪಡಿಸಿದ ಭೂಮಿ: ನಿರಾಣಿ
ಬೆಂಗಳೂರಿನ ಸೆಂಚುರಿ ಕ್ಲಬ್ನ್ನು ಪಾರ್ಕ್ ಜೋನ್ ನಿಂದ ಹೊರಗಿಟ್ಟಿಲ್ಲ. ಹೀಗಾಗಿ ಕ್ಲಬ್ನ ಅಭಿವೃದ್ಧಿ, ಪುನಶ್ಚೇತನ ಹಾಗೂ ನವೀಕರಣಕ್ಕೆ ಅಡಚಣೆ ಉಂಟಾಗಿದೆ. ಬೆಂಗಳೂರು ಸೆಂಚುರಿ ಕ್ಲಬ್ನ್ನು ಪಾರ್ಕ್ ಜೋನ್ನಿಂದ ಹೊರಗೆ ಇಡಬೇಕು. ಕ್ಲಬ್ ಸುಮಾರು 7 ಏಕರೆ ಜಾಗದಲ್ಲಿ ಇದೆ. ಕೂಡಲೇ ಸರ್ಕಾರ ಪಾರ್ಕ್ ಜೋನ್ನಿಂದ ಕೈ ಬಿಡಬೇಕು. ಈ ಮೂಲಕ ವಿಶ್ವೇಶ್ವರಯ್ಯ ಹೆಸರಿನಲ್ಲಿ ಕ್ಲಬ್ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದು ತೇಜಸ್ವಿನಿ ಗೌಡ ಒತ್ತಾಯ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವರು, ಸೆಂಚುರಿ ಕ್ಲಬ್ ಒಂದನ್ನು ಪಾರ್ಕ್ ಜೋನ್ನಿಂದ ಕೈ ಬಿಟ್ಟರೆ ಸಮಸ್ಯೆ ಆಗುತ್ತದೆ. ಇವತ್ತು ಒಂದಕ್ಕೆ ಅವಕಾಶ ನೀಡಿದರೆ, ಅದೇ ವಲಯಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಲಿವೆ. ಇಲ್ಲಿರೋ ಪಾರಂಪರಿಕ ಕಟ್ಟಡಗಳಿಗೆ ತೊಂದರೆ ಆಗಲಿದೆ. ಸೆಂಚುರಿ ಕ್ಲಬ್ ಪ್ರವೇಶದಲ್ಲಿ ಈಗ ಸಾರ್ವಜನಿಕರು ಓಡಾಡುತ್ತಿದ್ದಾರೆ. ಪಾರ್ಕ್ ಜೋನ್ನಿಂದ ಕೈ ಬಿಟ್ಟರೆ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಹಾಕ್ತಾರೆ. ನಮ್ಮ ತೋಟಗಾರಿಕೆ ಇಲಾಖೆಯಿಂದ ಸೆಂಚುರಿ ಕ್ಲಬ್ಗೆ ಯಾವುದೇ ಸಮಸ್ಯೆ ಆಗಿಲ್ಲ. ಹೀಗಾಗಿ ಸೆಂಚುರಿ ಕ್ಲಬ್ನ್ನು ಪಾರ್ಕ್ ಜೋನ್ನಿಂದ ಹೊರಗೆ ಇಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಂಗಳೂರಿನ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ
ಇದಕ್ಕೆ ವಿರೋಧ ಮಾಡಿದ ತೇಜಸ್ವಿನಿ ಗೌಡ, ಈಗಾಗಲೇ ಲೋಕೋಪಯೋಗಿ ಇಲಾಖೆ, ಯವನಿಕಾ, ಡಿಜಿ ಅಫೀಸ್ ಸೇರಿದಂತೆ ಅನೇಕ ಕಟ್ಟಡಗಳನ್ನು ಪಾರ್ಕ್ ಜೋನ್ನಿಂದ ಹೊರಗೆ ಇಡಲಾಗಿದೆ. ಸರ್ಕಾರ ಸೆಂಚುರಿ ಕ್ಲಬ್ನ್ನು ಪಾರ್ಕ್ ಜೋನ್ನಿಂದ ಹೊರಗಿಡಬೇಕು. ಇಲ್ಲದೆ ಹೋದ್ರೆ ಈಗ ಹೊರಗೆ ಇಟ್ಟಿರೋ ಕಟ್ಟಡಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ಕಬ್ಬನ್ ಪಾರ್ಕ್ ವಿಚಾರ ಕೋರ್ಟ್ನಲ್ಲಿ ಕೇಸ್ ಇದೆ. ಆದರೂ ಸ್ಥಳ ಪರಿಶೀಲನೆ ಮಾಡಿ, ಏನು ಅನುಕೂಲ ಸಾಧ್ಯವೋ ಅದನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.