ಚಾಮರಾಜನಗರ: ಅಫ್ಘಾನಿಸ್ತಾನ ಭಯೋತ್ಪಾದಕರ ಕೈಗೆ ಹೋಗುವುದು ಒಳ್ಳೆಯದಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ತಾಲಿಬಾನಿಗಳ ವಶಕ್ಕೆ ಅಫ್ಘಾನಿಸ್ತಾನ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಆತಂಕಕಾರಿ ಬೆಳವಣಿಗೆ. ನಾಗರೀಕ ಸರ್ಕಾರ ಧೂಳಿಪಟ ಮಾಡಿ ಭಯೋತ್ಪಾದಕರ ಕೈಗೆ ದೇಶ ಹೋಗುತ್ತೆ ಅಂದರೆ ವಿಶ್ವಕ್ಕೆ ಒಳ್ಳೆಯದಲ್ಲ. ಭಾರತದ ನಿಲುವೇನು ಅನ್ನೋದ್ನ ವಿದೇಶಾಂಗ ಸಚಿವರು ಸ್ಪಷ್ಟಪಡಿಸುತ್ತಾರೆ ಎಂದು ತಿಳಿಸಿದರು.
2023 ಅನ್ನು ಸಿರಿ ಧಾನ್ಯಗಳ ವರ್ಷವೆಂದು ಆಚರಿಸಲು ನಿರ್ಧಾರ ಮಾಡಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿ ಧಾನ್ಯಗಳ ವರ್ಷಾಚರಣೆಗೆ ಸಂಯುಕ್ತ ರಾಷ್ಟ್ರಗಳು ಒಪ್ಪಿಕೊಂಡಿವೆ. ಕೃಷಿ ಮೂಲ ಸೌಕರ್ಯಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. 10 ಸಾವಿರ ರೈತ ಉತ್ಪಾದಕ ಘಟಕಗಳನ್ನ ತೆರೆಯಲು ಉದ್ದೇಶಿಸಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವುದೇ ಕೇಂದ್ರ ಸರ್ಕಾರದ ಗುರಿಯಾಗಿದೆ. ದೇಶದಲ್ಲಿ ಶೇ 70 ರಷ್ಟು ರೈತರಿದ್ದಾರೆ. ರೈತರಿಗೆ ಧೈರ್ಯ ಮತ್ತು ಬಲ ತುಂಬಲು ರೈತರ ಮನೆಗಳಿಗೆ ತೆರಳುತ್ತಿದ್ದೇನೆ ಎಂದರು. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ
ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ನಶಿಸಿ ಹೋಗುತ್ತಿದೆ ಎಂಬ ಎಚ್.ಡಿ.ಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ, ಮೊದಲು ಅವರೆಲ್ಲಿದ್ದಾರೆ ಎಂಬುದನ್ನ ನೋಡಿಕೊಳ್ಳಲಿ ಎಂದು ತಿರುಗೇಟು ಕೊಟ್ಟರು. ಟೀಕೆಗಳಿಗೆ ನಾವು ಉತ್ತರ ಕೊಡಲ್ಲ, ಜನರು ಉತ್ತರ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ