ಬೆಂಗಳೂರು: ನಗರದ ಡಿಜಿ ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮೇಲೆ ರೌಡಿಗಳು ಮಚ್ಚು ಬೀಸಿದ ಪ್ರಕರಣದ ಸಿಸಿಟಿವಿ ದೃಶ್ಯ ಜನರನ್ನ ಬೆಚ್ಚಿ ಬೀಳಿಸಿದೆ.
ಏರಿಯಾದಲ್ಲಿ ರೌಡಿಗಳು ಮಚ್ಚು ಹಿಡಿದು ಓಡೋ ದೃಶ್ಯಗಳು ಜನರನ್ನ ಭಯಭೀತಗೊಳಿಸಿದೆ. ಕಳೆದ ಗುರವಾರ ಸಂಜೆ ಡಿಜಿ ಹಳ್ಳಿಯ ಶಾಂಪುರ ರಸ್ತೆಯಲ್ಲಿ ರೌಡಿ ಶೀಟರ್ ಉಮರ್ನನ್ನ ಕೊಲೆ ಮಾಡಲು ನದೀಮ್ ಗ್ಯಾಂಗ್ ಅಟ್ಟಿಸಿಕೊಂಡು ಹೋಗ್ತಿತ್ತು. ಇದನ್ನ ನೋಡಿದ ಡಿಜಿ ಹಳ್ಳಿಯ ಸಬ್ ಇನ್ಸ್ ಪೆಕ್ಟರ್ ನಯಾಜ್ ಆರೋಪಿಗಳನ್ನ ಹಿಡಿಯಲು, ಕೊಲೆ ಮಾಡೋದನ್ನ ತಡೆಯಲು ಗ್ಯಾಂಗ್ನ ಹಿಂದೆ ಓಡಿದ್ದಾರೆ. ಕೊನೆಗೆ ನದೀಮ್ ಗ್ಯಾಂಗ್ ಸಬ್ ಇನ್ಸ್ ಪೆಕ್ಟರ್ ನಯಾಜ್ ಮೇಲೆಯೇ ಮುಗಿಬಿದ್ದು, ಮಚ್ಚಿನಿಂದ ನಯಾಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ರೌಡಿಗಳು ಪೊಲೀಸ್ರ ಮೇಲೆಯೇ ಹೀಗೆ ಮಚ್ಚು ಬೀಸ್ತಾರೆ ಅಂದ್ರೆ ಸಾಮಾನ್ಯ ಜನರ ಗತಿ ಏನು ಅನ್ನೋ ಭಯದಲ್ಲಿ ಜನರು ಬದುಕ್ತಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಎಸ್ಐ ಚೇತರಿಸಿಕೊಳ್ತಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿ, ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಸಬ್ ಇನ್ಸ್ ಪೆಕ್ಟರ್ ನಯಾಜ್ ಹಾಗು ಪೇದೆಗಳು ಸ್ಥಳಕ್ಕೆ ಹೋಗಿದ್ರು. ನಯಾಜ್ ಮಫ್ತಿಯಲ್ಲಿದ್ರು. ಆರೋಪಿಗಳಿಗೆ ಪೊಲೀಸರು ಅಂತಾ ಗೊತ್ತಾಗಿಲ್ಲ. ಗಂಭೀರವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಘಟನೆಯ ಸಂದರ್ಭದಲ್ಲಿ ಸಬ್ ಇನ್ಸ್ ಪೆಕ್ಟರ್ ರಿವಾಲ್ವಾರ್ ಇಟ್ಟುಕೊಂಡಿರಲಿಲ್ಲ. ಈ ಬಗ್ಗೆಯೂ ಸಹ ಆಡಳಿತಾತ್ಮಕವಾಗಿ ತನಿಖೆ ನಡೆಸ್ತಿದ್ದೇವೆ ಅಂತ ತಿಳಿಸಿದ್ರು.
ಸಾರ್ವಜನಿಕ ಸ್ಥಳದಲ್ಲಿ ಲಾಂಗು ಮಚ್ಚು ಹಿಡಿದು ಓಡಾಡುವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಈ ಬಗ್ಗೆ ಜನರು ಭಯ ಪಡುವ ಅವಶ್ಯಕತೆಯಿಲ್ಲ. ಪ್ರಕರಣದ ಆರೋಪಿಗಳನ್ನ ಬಂಧಿಸಲು ಈಗಾಗಲೇ ಬಾಣಸವಾಡಿ ಎಸಿಪಿ ಯವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈಗಿನ ಘಟನೆ ಬಗ್ಗೆ ಯಾರೂ ಭಯ ಬೀಳೋದು ಬೇಡ. ನಾವು ಈಗಾಗಲೇ ಈ ಪ್ರಕರಣವನ್ನ ಗಂಭೀರವಾಗಿ ತಗೆದುಕೊಂಡಿದ್ದೇವೆ ಅಂತ ಹೇಳಿದ್ರು.
https://www.youtube.com/watch?v=JaZLrxeCuHw&feature=youtu.be