ಬೆಂಗಳೂರು: ಸಿಸಿಬಿ ಪೊಲೀಸರ ಸಮಯ ಪ್ರಜ್ಞೆಯಿಂದ ಮತ್ತೊಂದು ಮೆಗಾ ಪೇಪರ್ ಲೀಕ್ ಪ್ಲ್ಯಾನ್ ತಪ್ಪಿದ್ದು, ಈ ಸಂಬಂಧ ಸಿಸಿಬಿ ಪೊಲೀಸರು ಐವರು ಏಜೆಂಟರನ್ನು ಬಂಧಿಸಿದ್ದಾರೆ.
ಇಂದು ರಾಜ್ಯಾದ್ಯಂತ ಪಿಎಸ್ಐ ಪರೀಕ್ಷೆ ಇತ್ತು. ಇದೇ ವೇಳೆ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಲು ಏಜೆಂಟ್ ಗಳು ಸಂಚು ರೂಪಿಸಿದ್ದರು. ಅದೇ ರೀತಿ ಪೊಲೀಸರ ಕಣ್ಣುತಪ್ಪಿಸಿ ಲೀಕ್ ಮಾಡಲು ಮುಂದಾಗಿದ್ದರು. ಆದರೆ ಖಚಿತ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ದಾಳಿ ಮಾಡಿ ಗದಗಿನ ಗಜೇಂದ್ರಗಡದಲ್ಲಿ ಬೆಂಗಳೂರು ಮೂಲದ ಮೂವರು ಹಾಗೂ ಗದಗ ಮೂಲದ ಇಬ್ಬರು ಸೇರಿ ಒಟ್ಟು ಐವರು ಏಜೆಂಟರನ್ನು ಬಂಧಿಸಿದ್ದಾರೆ.
ಪೇಪರ್ ಲೀಕ್ ಬಗ್ಗೆ ಶನಿವಾರ ಸಂಜೆಯೇ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಕೂಡಲೇ ಎಂಟು ತಂಡಗಳನ್ನು ನಿಯೋಜನೆ ಮಾಡಿ ಉತ್ತರ ಕರ್ನಾಟಕ ಸೇರಿ ಹಲವೆಡೆ ಮಿಂಚಿನ ಕಾರ್ಯಾಚರಣೆ ಮಾಡಿದ್ದಾರೆ. ಆಗ ಪೇಪರ್ ಲೀಕ್ ಮಾಡಲು ಪ್ಲ್ಯಾನ್ ಮಾಡಿದ್ದವರನ್ನೆ ಸಿಸಿಬಿ ಪೊಲೀಸ್ ಬಂಧಿಸಿದ್ದಾರೆ.
ಸಿಸಿಬಿಯ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿದೆ. ಆದರೆ ದಾಳಿ ವೇಳೆ ಇನ್ನೂ ನಾಲ್ವರು ಏಜೆಂಟ್ ಗಳು ಪರಾರಿಯಾಗಿದ್ದು, ನಾಲ್ವರು ಏಜೆಂಟ್ ಗಳಿಗೆ ಶೋಧಕಾರ್ಯ ಮುಂದುವರಿದಿದೆ. ಏಜೆಂಟ್ ಗಳು ಪೇಪರ್ ಇಲ್ಲದೆಯೇ ಅಭ್ಯರ್ಥಿಗಳ ಬಳಿ ಹಣ ಪಡೆಯಲು ಮುಂದಾಗಿದ್ದು, ನೂರಾರು ಅಭ್ಯರ್ಥಿಗಳನ್ನ ಸಂಪರ್ಕಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಮಾಹಿತಿ ಪಡೆದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಸದ್ಯ ಐವರು ಏಜೆಂಟ್ ಗಳನ್ನ ಬಂಧಿಸಿ ಗದಗದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಹಿಂದೆ ಇವರು ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದರು. ಆದರೆ ಈಗ ಸಿಸಿಬಿ ಸಮಯ ಪ್ರಜ್ಞೆಯಿಂದ ಪಿಎಸ್ಐ ಪ್ರಶ್ನೆ ಪತ್ರಿಕೆ ಸೋರಿಕೆ ತಪ್ಪಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv