ಬೆಂಗಳೂರು: ಆಪರೇಷನ್ ಕಮಲದಲ್ಲಿ ಫುಲ್ ಬ್ಯುಸಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್ಗೆ ಸಿಸಿಬಿ ಬಿಸಿ ಮುಟ್ಟಿಸಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಪಿಎ ವಿನಯ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಸಂತೋಷ್. ಹೀಗಾಗಿ ಸಂತೋಷ್ ವಿಚಾರಣೆಗಾಗಿ ಸಿಸಿಬಿ ನೋಟಿಸ್ ಜಾರಿ ಮಾಡಿದ್ದು, ನೋಟಿಸ್ ತಲುಪಿದ ತಕ್ಷಣವೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರಂತೆ. ಸಿಸಿಬಿ ಕಳುಹಿಸಿರುವ ನೋಟಿಸ್ ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ತಲುಪಿದೆ. ಆದರೆ ಸಂತೋಷ್ ಸುಳ್ಳು ನೆಪಗಳನ್ನು ಹೇಳಿ ಸಿಸಿಬಿ ವಿಚಾರಣೆಗೆ ಹಾಜರಾಗದೇ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?:
ಇಸ್ಕಾನ್ ದೇವಾಲಯದ ಬಳಿ 8 ಜನರ ತಂಡವೊಂದು ವಿನಯ್ನನ್ನು 2017ರ ಮೇ 11 ರಂದು ಅಪಹರಣ ಮಾಡಲು ಪ್ರಯತ್ನಿಸಿತ್ತು. ಈ ಸಂಬಂಧ ವಿನಯ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣದ ಪ್ರಮುಖ ಆರೋಪಿ ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ಈ ಹಿಂದೆ ಜಾಮೀನು ಪಡೆದು ಮಹಾಲಕ್ಷ್ಮಿ ಲೇಔಟ್ ಪೊಲೀಸರ ಮುಂದೆ ಸಂತೋಷ್ ವಿಚಾರಣೆಗೆ ಹಾಜಾರಾಗಿದ್ದ. ಆದರೆ ಇದೀಗ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಸಂತೋಷ್ಗೆ ಸಂಕಷ್ಟ ಶುರುವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv