ಮುಂಬೈ: 2 ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ಅವರನ್ನು ಬಂಧಿಸಿದ್ದ ಮಾಜಿ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede) ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಶುಕ್ರವಾರ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿದೆ.
ವಾಂಖೆಡೆ ಭ್ರಷ್ಟಾಚಾರದ ಮೂಲಕ ಆಸ್ತಿ ಗಳಿಕೆ ಮಾಡಿರುವ ಆರೋಪದಡಿ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಸಮೀರ್ ವಾಂಖೆಡೆ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯ ಭಾಗವಾಗಿ ಅಂಧೇರಿ, ಮುಂಬೈಯಲ್ಲಿರುವ ಅವರ ಮನೆ ಸೇರಿದಂತೆ 29 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
2021ರ ಅಕ್ಟೋಬರ್ನಲ್ಲಿ ವಾಂಖೆಡೆ ನೇತೃತ್ವದ ತಂಡ ಮುಂಬೈ ಇಂಟರ್ನ್ಯಾಷನಲ್ ಕ್ರೂಸ್ ಟರ್ಮಿನಲ್ನಲ್ಲಿ ಕಾರ್ಡೆಲಿಯಾ ಹಡಗಿನ ಮೇಲೆ ದಾಳಿ ಮಾಡಿ ಆರ್ಯನ್ ಖಾನ್ ಹಾಗೂ ಇತರರನ್ನು ಬಂಧಿಸಿತ್ತು. ಮಾದಕ ವಸ್ತು ಸಂಗ್ರಹ, ಸೇವನೆ, ಕಳ್ಳಸಾಗಣೆಯ ಆರೋಪ ಹೊರಿಸಿ ಆರ್ಯನ್ ಖಾನ್ ಅವರನ್ನು 22 ದಿನಗಳ ಕಾಲ ಜೈಲಿನಲ್ಲಿಡಲಾಗಿತ್ತು. ಬಳಿಕ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎನ್ಸಿಬಿ ಮೇ 2022ರಲ್ಲಿ ಕ್ಲೀನ್ ಚಿಟ್ ನೀಡಿತ್ತು. ಇದನ್ನೂ ಓದಿ: ಕಣಿವೆಯಲ್ಲಿ ಹೆಚ್ಚುತ್ತಿರುವ ಉಗ್ರರ ಹಾವಳಿ – ಕೇಂದ್ರದ ದಿಟ್ಟ ನಿರ್ಧಾರ
ಇದರ ನಡುವೆ ಸಮೀರ್ ವಾಂಖೆಡೆ ವಿರುದ್ಧ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ಹಲವು ಆರೋಪಗಳನ್ನು ಮಾಡಿದರು. ಅದರಲ್ಲಿ ಒಂದು ವಾಂಖೆಡೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಹುದ್ದೆ ಪಡೆದಿದ್ದರು ಎಂಬುದೂ ಆಗಿತ್ತು. ಆ ಕೇಸ್ನ ಬಳಿಕ ಅವರಿಗೆ ಮಹಾರಾಷ್ಟ್ರದ ಜಾತಿ ಪರಿಶೀಲನಾ ಸಮಿತಿ ಕ್ಲೀನ್ ಚಿಟ್ ನೀಡಿತ್ತು. 2021ರಲ್ಲಿ ಎನ್ಸಿಬಿ ವಲಯ ನಿರ್ದೇಶಕರಾಗಿ ಅವರ ಅವಧಿ ಮುಗಿದಿದ್ದು ಬಳಿಕ ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿದ್ದರು. ಇದನ್ನೂ ಓದಿ: ಹಿಂಡನ್ಬರ್ಗ್ ವರದಿ ವಿವಾದ – ತನಿಖೆಗೆ 3 ತಿಂಗಳ ಗಡುವು ನೀಡಿದ ಸುಪ್ರೀಂ