ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮಿಳುನಾಡಿನಲ್ಲಿ ಪ್ರತಿಭಟನೆ ಮೇಲೆ ಪ್ರತಿಭಟನೆ ನಡಿಯುತ್ತಿದೆ. ಹೀಗಿರುವಾಗ ತಮಿಳು ಸಿನಿಮಾ ನಟರು ಕೂಡ ಪ್ರತಿಭಟನೆಗೆ ಬೆಂಬಲಿಸುತ್ತಿದ್ದಾರೆ. ರಜನಿಕಾಂತ್, ಕಮಲ್ ಹಾಸನ್ ಹೇಳಿಕೆಗೆ ಕನ್ನಡದ ಹಿರಿಯ ನಟ ಅನಂತ್ನಾಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಕೀಯಕ್ಕೆ ಇಳಿಯುತ್ತಿದ್ದ ಹಾಗೆಯೇ ತಮಿಳುನಾಡಿನ ನಟರು ಥೇಟ್ ರಾಜಕಾರಣಿಗಳ ಥರ ಆಡುತ್ತಿದ್ದಾರೆ. ಇಂಥ ಹೊತ್ತಲ್ಲಿ ಕನ್ನಡಿಗರು ಸುಮ್ಮನಿರಬೇಕೇ ಎಂದು ಹಿರಿಯ ನಟ ಅನಂತನಾಗ್ ಪ್ರಶ್ನಿಸಿದ್ದಾರೆ. ಕನ್ನಡದ ನೆಲ-ಜಲ-ಭಾಷೆ ಮತ್ತು ಕರ್ನಾಟಕದ ಮಾತು ಬಂದಾಗ ಸಮಸ್ತ ಕನ್ನಡಿಗರ ಜೊತೆಗೆ ನಾನಿದ್ದೇನೆ ಎಂದು ಘೋಷಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಕಾವೇರಿ ನದಿ ಹಂಚಿಕೆ ವಿಚಾರದಲ್ಲಿ ತಮಿಳುನಾಡು ಅಸಹನೆ, ಅಸಹಕಾರ, ಘರ್ಷಣೆ ನಿಲುವನ್ನ ತೋರಿಸುತ್ತ ಬಂದಿದೆ ಎನ್ನುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇಂದು ಮತ್ತೆ ತಮಿಳು ಮುಖಂಡರು ತಮಿಳುನಾಡು ಬಂದ್ ಆಚರಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ಕೇಂದ್ರದಲ್ಲಿರುವ ಸರ್ಕಾರ ಕರ್ನಾಟಕ್ಕೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ ಎಂಬ ಮಾತು ಕೇಳಿಬರುತ್ತಿದೆ. ನಿಜವೆಂದರೆ ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ನೀರು ಹಂಚಿಕೆಗೆ ಯಾವ ಸೂಕ್ತ, ಸೂತ್ರ ಪರಿಹಾರ ಸೂಚಿಸಿದ್ದರೂ ತಮಿಳುನಾಡು ಅಪಸ್ವರ ಎತ್ತಿಕೊಂಡೇ ಬಂದಿದೆ.
ಸುಪ್ರಿಂ ಕೋರ್ಟ್ ಕೂಡ ಯಾವುದೇ ಪರಿಹಾರ ನೀಡಲು ಮುಂದಾದರೂ ಅಲ್ಲಿಯ ರಾಜಕಾರಣಿಗಳು ಒಪ್ಪುವುದಿಲ್ಲ. ಈಗ ಸದ್ಯದಲ್ಲಿ ತಮಿಳುನಾಡಿನಲ್ಲಿ ಯಾವುದೇ ಚುನಾವಣೆ ಇಲ್ಲದಾಗಿಯೂ ಅಲ್ಲಿನ ನಟರು ರಾಜಕೀಯ ಪ್ರವೇಶ ಮಾಡುವ ಮಾತುಗಳಲ್ಲಿ ಹಿಂದಿನ ಪೀಳಿಗೆಯವರಂತೆಯೇ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ, ಕರ್ನಾಟಕ ಭಾಷೆ, ನೆಲ, ಜಲ ಕಾಪಾಡಿಕೊಳ್ಳುವ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜೊತೆ ನಾನು ಕೂಡ ಟೊಂಕ ಕಟ್ಟಿ ನಿಂತಿದ್ದೇನೆ ಎನ್ನುವುದನ್ನು ಘಂಟಾಘೋಷವಾಗಿ ಅನಿವಾರ್ಯವಾಗಿ, ನಮೃತ್ತೆಯಿಂದ ಹೇಳಲು ಇಚ್ಚಿಸುತ್ತೇನೆ ಎಂದು ಹಿರಿಯ ನಟ ಹೇಳಿಕೊಂಡಿದ್ದಾರೆ.