ಚೆನ್ನೈ: ಕಾವೇರಿ ನೀರು (Cauvery water) ಹಂಚಿಕೆ ವಿಚಾರವಾಗಿ ಕರ್ನಾಟಕದಲ್ಲಿ (Karnataka) ತಮಿಳರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂಬ ವದಂತಿ ಹಬ್ಬಿಸುವುದರ ವಿರುದ್ಧ ತಮಿಳುನಾಡು (Tamil Nadu) ಪೊಲೀಸರು (Police) ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಕಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಎರಡೂ ರಾಜ್ಯಗಳ ರೈತರು ಈ ವಿಚಾರವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಈ ವೇಳೆ ಇಂತಹ ಸುಳ್ಳು ಸುದ್ದಿಯ ವೀಡಿಯೋಗಳನ್ನು ಹರಿಬಿಟ್ಟರೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆ ಇದೆ. ಇದರಿಂದಾಗಿ ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Karnataka Bandh : ಶಾಲಾ, ಕಾಲೇಜುಗಳಿಗೆ ರಜೆ ನೀಡೋ ಅಧಿಕಾರ ಡಿಸಿಗಳಿಗೆ ಬಿಟ್ಟ ಶಿಕ್ಷಣ ಇಲಾಖೆ
ಸುಳ್ಳು ವೀಡಿಯೋ ಹಂಚಿರುವ ವಿಚಾರವಾಗಿ ಮಧುರೈ ಮತ್ತು ತಿರುನಲ್ವೇಲಿ ಜಿಲ್ಲೆಗಳಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಒಬ್ಬ ಆರೋಪಿಯನ್ನು ಸೀಮಾನ್ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 53, 153 ಎ, 504, 505 (1) (ಬಿ), 505 (2) ಮತ್ತು 67 ಐಟಿ ಕಾಯ್ದೆ 2008ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಲ್ವನ್ ಎಂಬ ಮತ್ತೊಬ್ಬ ವ್ಯಕ್ತಿಯ ವಿರುದ್ಧ ತಿರುನಲ್ವೇಲಿ ಪೆÇಲೀಸರು ಐಪಿಸಿ ಸೆಕ್ಷನ್ 153, 153ಎ ಮತ್ತು 505(1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಬೆಂಗಳೂರಿನಲ್ಲಿ ಲಾರಿ ಚಾಲಕನಿಗೆ ಥಳಿಸಿದ ಹಳೆಯ ವೀಡಿಯೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಳು ಸುದ್ದಿಗಳು ಮತ್ತು ವೀಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಆತಂಕ ಸೃಷ್ಟಿಸಲು ಯತ್ನಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಇಂತಹ ವದಂತಿಗಳನ್ನು ಹರಡುವುದರ ವಿರುದ್ಧ ನಾವು ಜನರಿಗೆ ಕಠಿಣ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್ : ಸಿನಿಮಾ ಬಿಡುಗಡೆ ಮುಂದೂಡಲು ಮನವಿ
Web Stories