ಮಾಲೆಗಾಂವ್ ಸ್ಫೋಟ ಕೇಸ್‌ನಿಂದ ನನ್ನ ಜೀವನವೇ ಹಾಳಾಯ್ತು: ಪ್ರಜ್ಞಾ ಠಾಕೂರ್

Public TV
1 Min Read
Pragya Thakur

ಮುಂಬೈ: ಮಾಲೆಗಾಂವ್ ಸ್ಫೋಟ ಪ್ರಕರಣ (Malegaon Blast Case) ನನ್ನ ಜೀವನವನ್ನೇ ಹಾಳು ಮಾಡಿದೆ ಎಂದು ಬಿಜೆಪಿಯ (BJP) ಮಾಜಿ ಸಂಸದೆ ಪ್ರಜ್ಞಾ ಠಾಕೂರ್ (Pragya Thakur) ಹೇಳಿದ್ದಾರೆ. ಎನ್‌ಐಎ ವಿಶೇಷ ನ್ಯಾಯಾಲಯ ಆರೋಪಗಳಿಂದ ಖುಲಾಸೆಗೊಳಿಸಿದ ಬಳಿಕ ಅವರು ಪ್ರತಿಕ್ರಿಯೆ ನೀಡಿದರು.

ತೀರ್ಪು ಪ್ರಕಟವಾದಾಗ ಅವರು ನ್ಯಾಯಾಲಯದಲ್ಲಿದ್ದರು. ಈ ವೇಳೆ, ನ್ಯಾಯಾಲಯವನ್ನು ಉದ್ದೇಶಿಸಿ, ಈ ಹಿಂದೆ ತನಿಖೆಗಾಗಿ ನನ್ನನ್ನು ಕರೆಸಿ, ಬಂಧಿಸಿ, ಚಿತ್ರಹಿಂಸೆ ನೀಡಲಾಯಿತು. ಇದರಿಂದ ನನ್ನ ಇಡೀ ಜೀವನವೇ ಹಾಳಾಯ್ತು. ನಾನು ಸಾಧ್ವಿ ಜೀವನವನ್ನು ನಡೆಸುತ್ತಿದ್ದೆ. ಆದರೆ ನನ್ನನ್ನು ಆರೋಪಿಯನ್ನಾಗಿ ಮಾಡಲಾಯಿತು. ಪಿತೂರಿಯಿಂದ ಕೇಸರಿಯನ್ನೂ ದೂಷಿಸಿದರು. ಇಂದು ಕೇಸರಿ, ಹಿಂದುತ್ವ ಗೆದ್ದಿದೆ. ತಪ್ಪಿತಸ್ಥರನ್ನು ದೇವರು ಶಿಕ್ಷಿಸುತ್ತಾನೆ. ನಾನು ಸನ್ಯಾಸಿಯಾಗಿರುವುದರಿಂದ ನಾನು ಜೀವಂತವಾಗಿದ್ದೇನೆ ಎಂದರು. ಇದನ್ನೂ ಓದಿ: Malegaon Blast Case | ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳು ಖುಲಾಸೆ

ಈ ಹಿಂದೆ ಪ್ರಕರಣದಲ್ಲಿ ನನ್ನನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದರು. ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2014 ರಲ್ಲಿ ತನಿಖೆಗೆ ಆದೇಶಿಸಿತ್ತು. ಆದರೆ ಅವರ ಆರೋಪಗಳನ್ನು ಸಾಭೀತುಪಡಿಸಲು ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ.

ಸೆಪ್ಟೆಂಬರ್ 29, 2008 ರಂದು ನಡೆದ ಮಾಲೆಗಾಂವ್ ಸ್ಫೋಟ ಬೈಕ್‌ನಲ್ಲಿ ಅಳವಡಿಸಲಾದ ಸ್ಫೋಟಕಗಳಿಂದ ಸಂಭವಿಸಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಮುಂಬೈ ಭಯೋತ್ಪಾದನಾ ನಿಗ್ರಹ ದಳದ ತನಿಖೆಯ ಸಮಯದಲ್ಲಿ ಬೈಕ್‌ನ ಬಿಡಿ ಭಾಗಗಳನ್ನು ವಿಧಿವಿಜ್ಞಾನ ಪರೀಕ್ಷೆಗಳಿಗೆ ಕಳುಹಿಸಿ, ಎಂಜಿನ್ ಸಂಖ್ಯೆಯನ್ನು ಪುನಃಸ್ಥಾಪಿಸಿದ್ದವು. ಬೈಕ್ ಠಾಕೂರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಅವರನ್ನು ಅ.23, 2008 ರಂದು ಬಂಧಿಸಲಾಗಿತ್ತು.‌ ಇದೀಗ ಪ್ರಜ್ಞಾ ಠಾಕೂರ್ ಸೇರಿದಂತೆ 7 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇದನ್ನೂ ಓದಿ: ಭಯೋತ್ಪಾದಕರನ್ನು ಬೆಳೆಸಿದ ಕಾಂಗ್ರೆಸ್, ಹಿಂದೂ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದೆ: ಯೋಗಿ

Share This Article